ಕಲಬುರಗಿಯಲ್ಲಿ ಆಗಸ್ಟ್ 28ರಂದು ಶುಕ್ಲ ಯಜುರ್ವೇದೀಯ ಉಪಾಕರ್ಮ ಆಚರಣೆ
ಶ್ರಾವಣ ಪೂರ್ಣಿಮೆಯಂದು ಬೆಳಗ್ಗೆ 6.45ಕ್ಕೆ ಸಾಮೂಹಿಕ ಉಪಾಕರ್ಮ ಕಾರ್ಯಕ್ರಮ

ಕಲಬುರಗಿ, ಆ.25- ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಯಾಜ್ಞವಲ್ಕ್ಯ ಭವನದಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿ ವತಿಯಿಂದ ಶುಕ್ಲ ಯಜುರ್ವೇದೀಯ ಉಪಾಕರ್ಮ (ಯಜ್ಞೋಪವೀತ ಧಾರಣೆ/ಜನಿವಾರ ಧರಿಸುವುದು) ಕಾರ್ಯಕ್ರಮವನ್ನು ಆಗಸ್ಟ್ 28ರಂದು ಶುಕ್ರವಾರ ಶ್ರಾವಣ ಪೂರ್ಣಿಮೆಯ ಶುಭದಿನದಂದು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 6.45ಕ್ಕೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಮೂಹಿಕ ಉಪಾಕರ್ಮ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮಲ್ಲಾರರಾವ್ ಗಾರಂಪಳ್ಳಿ ಹಾಗೂ ಕಾರ್ಯದರ್ಶಿ ರಾಘವೇಂದ್ರ ವಕೀಲರು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಶುಕ್ಲ ಯಜುರ್ವೇದೀಯ ಬಾಂಧವರು ಸಾಂಪ್ರದಾಯಿಕ ಧಾರ್ಮಿಕ ಉಡುಗೆಯಲ್ಲಿ ಭಾಗವಹಿಸಬೇಕು. ಪೂಜಾ ಕೈಂಕರ್ಯಗಳಿಗೆ ಅಗತ್ಯವಿರುವ ತಟ್ಟೆ, ತಾಳಿ, ಉದ್ಧರಣಿ, ತಂಬಿಗೆ ಹಾಗೂ ಅರ್ಘ್ಯ ಪಾತ್ರೆಗಳನ್ನು ಪ್ರತಿಯೊಬ್ಬರೂ ಸ್ವತಃ ತೆಗೆದುಕೊಂಡು ಬರಬೇಕು ಎಂದು ಸಮಿತಿ ಮನವಿ ಮಾಡಿದೆ.
ನೂತನ ಉಪಾಕರ್ಮಕ್ಕೆ ಸಂಬಂಧಿಸಿದಂತೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನಕ್ಕಾಗಿ ವೇ.ಮೂ. ಹರೀಶ ಆಚಾರ್ಯ ಅಥವಾ ವೇ.ಮೂ. ಶ್ರೀರಾಮಾಚಾರ್ಯರನ್ನು ಸಂಪರ್ಕಿಸಬಹುದು ಎಂದು ಸಮಿತಿ ತಿಳಿಸಿದೆ.



