ಅಪರಾಧ

ಉದ್ಯೋಗದ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ದೂಡಿದ ಆರೋಪ: ಸಲೂನ್ ಮಾಲೀಕ ಬಂಧನ

ವಿಜಯಪುರದ ಮಹಿಳೆಗೆ ಕೆಲಸದ ಭರವಸೆ ನೀಡಿ ಶೋಷಣೆ; ಕಲಬುರಗಿಯಲ್ಲಿ ಪೊಲೀಸ್ ದಾಳಿ

ಉದ್ಯೋಗ ನೀಡುವುದಾಗಿ ನಂಬಿಸಿ ವಿಜಯಪುರ ಮೂಲದ ಮಹಿಳೆಯನ್ನು ಕಲಬುರಗಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡಿದ ಆರೋಪದಡಿ ನಗರದ ಸಲೂನ್ ಮಾಲೀಕನನ್ನು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ನಗರದ ಕೆಎಚ್‌ಬಿ ಕಾಲೋನಿಯ ಗಾಬರೆ ಲೇಔಟ್‌ನಲ್ಲಿರುವ ಯುನಿಸೆಕ್ಸ್ ಸಲೂನ್‌ನ ಮಾಲೀಕ ಮಂಜುನಾಥ್ ಎಂದು ಗುರುತಿಸಲಾಗಿದೆ.

ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಸಲೂನ್‌ನಲ್ಲಿ ಒಬ್ಬ ಮಹಿಳೆ ಹಾಗೂ ಒಬ್ಬ ಗ್ರಾಹಕ ಇರುವುದನ್ನು ಪತ್ತೆಹಚ್ಚಿದರು. ಸ್ಥಳದಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ, ಆತ ಅಫಜಲಪುರ ಮೂಲದ 40 ವರ್ಷದ ವ್ಯಕ್ತಿ ಎಂದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ, ವಿಜಯಪುರದ 27 ವರ್ಷದ ಮಹಿಳೆಗೆ ಸಲೂನ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು, ನಂತರ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಲಾಗುತ್ತಿತ್ತು ಎಂಬ ಆರೋಪ ಬೆಳಕಿಗೆ ಬಂದಿದೆ. ಗ್ರಾಹಕರಿಂದ ಪಡೆದ ಹಣದಲ್ಲಿ ಒಂದು ಭಾಗವನ್ನು ಮಹಿಳೆಗೆ ನೀಡಿ, ಉಳಿದ ಹಣವನ್ನು ಆರೋಪಿ ಪಡೆದುಕೊಳ್ಳುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ವೇಳೆ ಮಹಿಳೆಯ ಬಳಿಯಿಂದ ಕೆಲವು ವಸ್ತುಗಳನ್ನು ಹಾಗೂ ಆರೋಪಿಯ ಬಳಿಯಿಂದ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸಂತ್ರಸ್ತ ಮಹಿಳೆಯನ್ನು ರಕ್ಷಿಸಿ, ಆಕೆಯ ಸಂಬಂಧಿಕರ ವಶಕ್ಕೆ ಒಪ್ಪಿಸಲಾಗಿದೆ.

ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಮುಂದುವರಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button