ಗದಗ ಜಾತ್ರಾ ಮಹೋತ್ಸವದಲ್ಲಿ ಬಾಬುರಾವ ಕೋಬಾಳ್ ಅವರ ಸಂಗೀತ ರಸದೌತಣ
ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಡಾ. ಪುಟ್ಟರಾಜ ಕವಿ ಗವಾಯಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಸಂಗೀತ ಸಮಾರಾಧನೆ

ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗದಲ್ಲಿ ಲಿಂ. ಪಂಡಿತ ಪಂಚಾಕ್ಷರಿ ಗವಾಯಿಗಳವರ 82ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಸಂಗೀತ ಸಮಾರಾಧನೆ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಬಾಬುರಾವ ಕೋಬಾಳ್ ಅವರ ಸಂಗೀತ ಕಾರ್ಯಕ್ರಮ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಬಾಬುರಾವ ಕೋಬಾಳ್ ಅವರು ಭಕ್ತಿ ಹಾಗೂ ಶಾಸ್ತ್ರೀಯ ಸಂಗೀತದ ಮೂಲಕ ನೆರೆದಿದ್ದ ಸಂಗೀತಾಸಕ್ತರನ್ನು ರಂಜಿಸಿದರು. ಆಕಾಶವಾಣಿ ಕಲಾವಿದ ಅಶೋಕ ಆಳಂದ ಅವರು ತಬಲಾ ಸಹವಾದನ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಐದು ದಿನಗಳ ಕಾಲ ನಿರಂತರವಾಗಿ ನಡೆದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಖ್ಯಾತ ಸಂಗೀತಗಾರರು, ಪ್ರವಚನಕಾರರು, ಆಕಾಶವಾಣಿ ಕಲಾವಿದರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಅಂತರರಾಷ್ಟ್ರೀಯ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಂಗೀತ ಸಮಾರಾಧನೆಯ ಮೂಲಕ ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಡಾ. ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಪರಂಪರೆಯನ್ನು ಸ್ಮರಿಸಲಾಯಿತು. ಈ ಜಾತ್ರಾ ಮಹೋತ್ಸವವು ಸಂಗೀತಾಭಿಮಾನಿಗಳಿಗೆ ಅಪರೂಪದ ಸಾಂಸ್ಕೃತಿಕ ಅನುಭವವನ್ನು ನೀಡಿತು.



