ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕುಮಾರಮಂಗಲಂರಿಗೆ ಸ್ಪೇನ್ ಸರ್ಕಾರದ ಸಂಶೋಧನಾ ಅನುದಾನ

ಕಲಬುರ್ಗಿ, ಜು.೩- ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸ್ಪ್ಯಾನಿಷ್ ಭಾಷೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ. ಕುಮಾರ್ ಮಂಗಲಂ ಅವರಿಗೆ ೨೦೨೬-೨೭ನೇ ಸಾಲಿನ ಶೈಕ್ಷಣಿಕ ವರ್ಷದ ಸ್ಪೇನ್ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಕೃತಿ ಸಚಿವಾಲಯದಿಂದ ಪ್ರತಿಷ್ಠಿತ ಹಿಸ್ಪಾನೆಕ್ಸ್ ಸಂಶೋಧನಾ ಅನುದಾನ ಲಭಿಸಿದೆ.
ಹಿಸ್ಪಾನೆಕ್ಸ್ ಸಂಶೋಧನಾ ಕಾರ್ಯಕ್ರಮವು ಸ್ಪೇನ್ ಸರ್ಕಾರದ ಅತ್ಯಂತ ಪ್ರತಿಷ್ಠಿತ ಹಾಗೂ ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಸಂಶೋಧನಾ ಯೋಜನೆಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ಸ್ಪ್ಯಾನಿಷ್ ಭಾಷೆ, ಸಾಹಿತ್ಯ ಮತ್ತು ಹಿಸ್ಪಾನಿಕ್ ಅಧ್ಯಯನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸಂಶೋಧನೆಗಾಗಿ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಈ ಅನುದಾನ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವಿಶ್ವದ ವಿವಿಧ ದೇಶಗಳ ಸ್ಪ್ಯಾನಿಷ್ ಭಾಷಾ ವಿದ್ವಾಂಸರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ವಿಶ್ವದಾದ್ಯಂತ ಆಯ್ಕೆಯಾದ ಕೇವಲ ೧೫ ಸಂಶೋಧನಾ ಯೋಜನೆಗಳಲ್ಲಿ ಡಾ. ಮಂಗಲಂ ಅವರ ಯೋಜನೆಯೂ ಒಂದಾಗಿದ್ದು, ಭಾರತದ ಪರವಾಗಿ ಆಯ್ಕೆಯಾದ ಕೇವಲ ಎರಡು ಪ್ರಸ್ತಾವನೆಗಳಲ್ಲಿ ಇದೂ ಒಂದಾಗಿದೆ.ಈ ಸಾಧನೆಯು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಮಾತ್ರವಲ್ಲದೆ ದೇಶಕ್ಕೂ ಹೆಮ್ಮೆಯ ವಿಷಯವಾಗಿದ್ದು, ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆಗೆ ಮತ್ತಷ್ಟು ಮೆರಗು ತಂದಿದೆ.
ಡಾ. ಮಂಗಲಂ ಅವರ ಸಂಶೋಧನಾ ಯೋಜನೆಯು ಕನ್ನಡ ಸಾಹಿತ್ಯದ ಪ್ರಥಮ ಮಹಿಳಾ ಕವಯತ್ರಿ, ೧೨ನೇ ಶತಮಾನದ ಶರಣೆ ಹಾಗೂ ಪ್ರಸಿದ್ಧ ವಚನಗಾರ್ತಿ ಅಕ್ಕ ಮಹಾದೇವಿ ಸೇರಿದಂತೆ ಪ್ರಮುಖ ವಚನಕಾರರ ಸಾಹಿತ್ಯ ಮತ್ತು ಆಧ್ಯಾತ್ಮಿಕ ಕೊಡುಗೆಗಳನ್ನು ಮಧ್ಯಕಾಲೀನ ಸ್ಪೇನ್ನ ಸಂತ-ಕವಯತ್ರಿ ಸಾಂತಾ ತೆರೇಸಾ ಡಿ ಅವಿಲಾ ಅವರ ಸಾಹಿತ್ಯ ಹಾಗೂ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ತುಲನಾತ್ಮಕವಾಗಿ ಅಧ್ಯಯನ ಮಾಡಲಿದೆ. ಈ ಸಂಶೋಧನೆಯು ಭಾರತ ಮತ್ತು ಸ್ಪೇನ್ ದೇಶಗಳ ಸಾಹಿತ್ಯ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಗಳ ನಡುವೆ ಅಂತರ್-ಸಾಂಸ್ಕೃತಿಕ ಸಂವಾದವನ್ನು ಬಲಪಡಿಸುವುದರೊಂದಿಗೆ ವಿದ್ವತ್ಪೂರ್ಣ ವಿನಿಮಯಕ್ಕೂ ಹೊಸ ಆಯಾಮವನ್ನು ನೀಡಲಿದೆ.
ವಚನ ಸಾಹಿತ್ಯವನ್ನು ಪ್ರಮುಖ ವಿದೇಶಿ ಭಾಷೆಗಳಿಗೆ ಭಾಷಾಂತರಿಸುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷಿ ಉಪಕ್ರಮದ ಭಾಗವಾಗಿ ಡಾ. ಮಂಗಲಂ ಅವರು ಈಗಾಗಲೇ ಸುಮಾರು ೨,೫೦೦ ವಚನಗಳನ್ನು ಸ್ಪ್ಯಾನಿಷ್ ಭಾಷೆಗೆ ಅನುವಾದಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಯೋಜನೆಯಲ್ಲಿ ಡಾ. ಪಿಯಾಲಿ ರಾಯ್ ಅವರ ಜಪಾನೀಸ್ ಭಾಷಾಂತರ ಹಾಗೂ ಶಿವಂ ಮಿಶ್ರಾ ಅವರ ಜರ್ಮನ್ ಭಾಷಾಂತರವೂ ಒಳಗೊಂಡಿದ್ದು, ಕರ್ನಾಟಕದ ಶ್ರೀಮಂತ ಸಾಹಿತ್ಯ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪ್ರಚಾರಗೊಳಿಸಲು ಸಹಕಾರಿಯಾಗಲಿದೆ.
ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಈ ಮಹತ್ವದ ಸಾಧನೆ ಮಾಡಿದ ಡಾ. ಪಿ. ಕುಮಾರ್ ಮಂಗಲಂ ಅವರನ್ನು ಅಭಿನಂದಿಸಿದ್ದಾರೆ, ಈ ಸಾಧನೆಯು ನಮ್ಮ ವಿಶ್ವವಿದ್ಯಾಲಯಕ್ಕೆ ಅಂತರಾಷ್ಟಿçÃಯ ಮಟ್ಟದಲ್ಲಿ ಮನ್ನಣೆ ಹಾಗೂ ಮತ್ತಷ್ಟು ಗೌರವವನ್ನು ತಂದುಕೊಟ್ಟಿದೆ ಎಂದು ಹೇಳಿದ್ದಾರೆ. ಡಾ. ಮಂಗಲಂ ಅವರ ಈ ಶೈಕ್ಷಣಿಕ ಸಾಧನೆ ನಮ್ಮ ವಿಶ್ವವಿದ್ಯಾಲಯದ ಸಂಶೋಧನಾ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಅವರ ಸಂಶೋಧನಾ ಕಾರ್ಯಗಳು ಹೀಗೆ ನಿರಂತರವಾಗಿ ಮುಂದುವರಿದು, ಆಧ್ಯಾತ್ಮಿಕ ಪರಂಪರೆಗೆ, ನಮ್ಮ ದೇಶದ, ಸಮಾಜಕ್ಕೆ ಹಾಗೂ ಜ್ಞಾನಲೋಕಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಲೆಂದು ಹಾಗೂ ಇಂತಹ ಸಾಧನೆಗಳು ಯುವ ಸಂಶೋಧಕರಿಗೆ ಪ್ರೇರಣೆಯಾಗಿದ್ದು, ಸಂಶೋಧನಾ ಕ್ಷೇತ್ರದಲ್ಲಿ ಮತ್ತಷ್ಟು ಶ್ರೇಷ್ಠತೆಯನ್ನು ಸಾಧಿಸಲು ಇದು ಉತ್ತೇಜನ ನೀಡಲಿವೆ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ವಿಭಾಗದ ಡೀನ್ ಪ್ರೊ. ವಿಕ್ರಮ್ ವಿಸಾಜಿ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಮುಖ್ಯಸ್ಥರಾದ ಪ್ರೊ. ಬಸವರಾಜ್ ಪಿ. ಡೋಣೂರ್, ಪ್ರಾಧ್ಯಾಪಕರು ಹಾಗೂ ಬಸವ ಪೀಠದ ಸಂಯೋಜಕ ಡಾ. ಗಣಪತಿ ಸಿನ್ನೂರ್ ಹಾಗೂ ಬೆಂಗಳೂರಿನ ಬಸವ ಸಮಿತಿಯ ಅರವಿಂದ್ ಜತ್ತಿ ಅವರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನಿರಂತರ ಸಹಕಾರಕ್ಕಾಗಿ ಡಾ. ಪಿ. ಕುಮಾರ್ ಮಂಗಲಂ ಅವರು ವಿಶೇಷ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.



