ಸೌಹಾರ್ದ-ಬಾಂಧವ್ಯಕ್ಕಾಗಿ ಬೀದರ್ನಿಂದ ಬೆಂಗಳೂರಿಗೆ ಪಾದಯಾತ್ರೆ; ಪ್ರೊ. ರೂಪೇಶ್ ಪುತ್ಥೂರು ಚಾಲನೆ
ಕನ್ನಡ, ಸಂವಿಧಾನ ಮೌಲ್ಯಗಳು ಮತ್ತು ಸಾಮಾಜಿಕ ಸೌಹಾರ್ದದ ಸಂದೇಶ ಹೊತ್ತ 30 ದಿನಗಳ ಐತಿಹಾಸಿಕ ಪಾದಯಾತ್ರೆ ಆರಂಭ

ಬೀದರ್, ಜು.11: ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಸಮಾಜದಲ್ಲಿ ಸೌಹಾರ್ದ, ಬಾಂಧವ್ಯ, ಭ್ರಾತೃತ್ವ ಮತ್ತು ಸಂವಿಧಾನ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶದಿಂದ ಬೀದರ್ನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಪ್ರೊ. ರೂಪೇಶ್ ಪುತ್ಥೂರು ಶನಿವಾರ ಚಾಲನೆ ನೀಡಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕರೂ ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಂಡು ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರತಿ ಗ್ರಾಮದಲ್ಲೂ 24 ಗಂಟೆಗಳ ಕಾಲ ಸಾರ್ವಜನಿಕರಿಗೆ ಮುಕ್ತವಾಗಿರುವ ಗ್ರಂಥಾಲಯಗಳು ಸ್ಥಾಪನೆಯಾಗಬೇಕು. ನಿಜವಾದ ಇತಿಹಾಸವನ್ನು ಅರಿಯದೆ ಸುಳ್ಳು ಇತಿಹಾಸವನ್ನು ಓದುವುದು ಮತ್ತು ಹರಡುವುದರಿಂದ ಸಮಾಜದಲ್ಲಿ ದ್ವೇಷ ಹಾಗೂ ಅಸಹಿಷ್ಣುತೆ ಹೆಚ್ಚುತ್ತದೆ. ಈ ಪರಿಸ್ಥಿತಿಯನ್ನು ಬದಲಿಸಲು ಜ್ಞಾನ ಮತ್ತು ಸಂವಿಧಾನ ಮೌಲ್ಯಗಳ ಅರಿವು ಅತ್ಯಗತ್ಯ ಎಂದು ಅವರು ಹೇಳಿದರು.
ಕನ್ನಡ ನಾಡು, ನುಡಿ, ಸಂಸ್ಕೃತಿಯ ರಕ್ಷಣೆ, ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಸೌಹಾರ್ದ, ಬಾಂಧವ್ಯ ಮತ್ತು ಭ್ರಾತೃತ್ವದ ವಾತಾವರಣ ನಿರ್ಮಾಣದ ಉದ್ದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 30 ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದರು.
ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಬುದ್ಧ-ಬಸವ-ಅಂಬೇಡ್ಕರ್ ಯುವ ಸಂಘಟನೆಯ ಅಧ್ಯಕ್ಷ ಮಹೇಶ್ ಗೋರನಾಳಕರ ಮಾತನಾಡಿ, ಕರಾವಳಿಯ ಪ್ರೊ. ರೂಪೇಶ್ ಪುತ್ಥೂರು ಅವರು ಬೀದರ್ನಿಂದ ಬೆಂಗಳೂರಿನವರೆಗೆ ಏಕಾಂಗಿಯಾಗಿ ಪಾದಯಾತ್ರೆ ಕೈಗೊಂಡಿರುವುದು ಐತಿಹಾಸಿಕ ಸಾಹಸ ಎಂದು ಶ್ಲಾಘಿಸಿದರು.
ಪಾದಯಾತ್ರೆ ಸಾಗುವ ಮಾರ್ಗದಲ್ಲಿರುವ ಗ್ರಾಮಸ್ಥರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ವಸತಿ, ಊಟೋಪಚಾರ ಸೇರಿದಂತೆ ಅಗತ್ಯ ಸಹಕಾರ ನೀಡಿ ಈ ಸಾಮಾಜಿಕ ಅಭಿಯಾನಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಟೀಂ ಯುವ ಸಂಸ್ಥೆಯ ಅಧ್ಯಕ್ಷ ವಿನಯಕುಮಾರ ಮಾಳಗೆ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಭೋಸಲೆ, ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ್ ದಿನೆ, ರಾಜಕುಮಾರ್ ಗಾದಗಿ, ಉದಯ ನಾಯಕ್, ಜಗದೀಶ್ವರ ಬಿರಾದಾರ್, ಶ್ರೀಧರ ಸೋಮೆನೋರ್, ತುಕಾರಾಮ ನೆಳಗೆ, ಅರ್ಜುನ ಕಾಂಚೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



