
ಜೇವರ್ಗಿ, ಜು.25: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉಂಟಾಗಿರುವ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಶುಕ್ರವಾರ ಜೇವರ್ಗಿಯಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ನಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಳಿಕ ಉಪ ತಹಶೀಲ್ದಾರ್ ಟಿಪ್ಪು ಸುಲ್ತಾನ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.
ದೇಶದ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಕಾಪಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಟಿಪ್ಪು ಸುಲ್ತಾನ್ ಸಮಿತಿ ಅಧ್ಯಕ್ಷ ಮೊಹಿಯುದ್ದೀನ್ ಇನಾಮದಾರ, ಸೇಠ್ ಗಿರಣಿ, ಪಾಟೀಲ್ ಮುತ್ತುಕೋಡ, ರವಿಚಂದ್ರ ಗುಟ್ಟೇದಾರ, ಇಬ್ರಾಹಿಂ ಪಟೇಲ್, ಮೊಬಿನ್ ಗುಟ್ಟೇದಾರ, ಸುನೀಲ್ ಚನ್ನೂರು, ಕರವೇ ಹೋರಾಟಗಾರ ಬಿ.ಎಚ್. ಮಾಲಿಪಾಟೀಲ್, ರೈತ ಮುಖಂಡ ಅಲ್ಲಾ ಪಟೇಲ್ ಇಜೇರಿ, ದಲಿತ ಮುಖಂಡರಾದ ಭೀಮರಾಯ ನಾಗನೂರ, ಮಲ್ಲಣ್ಣ ಕೊಡಚಿ, ಸಿದ್ರಾಮ ಕಟ್ಟಿ, ಶ್ರೀಹರಿ ಕರಕಿಹಳ್ಳಿ, ರವಿ ಕುರಳಗೇರಾ, ವಿಶ್ವರಾಧ್ಯ ಗಂವಾರ, ಬಸವರಾಜ ಬಾಗೇವಾಡಿ, ಮಹಿಬೂಬ್, ಭೀಮರಾಯ ಮಣಿಯಾರ್ ಮಳ್ಳಿ, ಕಾಂತಪ್ಪ ಚನ್ನೂರು, ಭೀಮರಾಯ ಖಾದ್ಯಾಪೂರ ಹಾಗೂ ರಿಯಾಜ್ ಯಾಳವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.



