ಜಿಂಬಾಬ್ವೆ ವಿರುದ್ಧ ಮೊದಲ ಟಿ20: ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುತ್ತಾ? ಭಾರತದ ಸಂಭಾವ್ಯ ತಂಡ ಪ್ರಕಟ
ಆರಂಭಿಕ ಜೋಡಿಯಲ್ಲಿ ದೊಡ್ಡ ಗೊಂದಲ; ನಾಯಕ ಶ್ರೇಯಸ್ ಅಯ್ಯರ್ಗೆ ಗೆಲುವಿನ ಸವಾಲು

ಜಿಂಬಾಬ್ವೆ ವಿರುದ್ಧ ಗುರುವಾರ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಆಡುವ ಹನ್ನೊಂದರ ಕುರಿತು ಚರ್ಚೆಗಳು ಜೋರಾಗಿವೆ. ಇಂಗ್ಲೆಂಡ್ ಪ್ರವಾಸದಲ್ಲಿ ಸತತ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ನಲ್ಲಿ ವಿಫಲವಾದ ಬಳಿಕ ತಂಡದಿಂದ ಹೊರಗುಳಿದಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತೆ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಭಾರತ ತಂಡವು ಕಳೆದ ಏಳು ಟಿ20 ಪಂದ್ಯಗಳಲ್ಲಿ ಗೆಲುವು ದಾಖಲಿಸದಿರುವ ಹಿನ್ನೆಲೆ, ನೂತನ ನಾಯಕ ಶ್ರೇಯಸ್ ಅಯ್ಯರ್ ತಂಡವನ್ನು ಮತ್ತೆ ಗೆಲುವಿನ ಹಾದಿಗೆ ತರುವ ಒತ್ತಡದಲ್ಲಿದ್ದಾರೆ. ಆದರೆ ಮೊದಲ ಪಂದ್ಯದಲ್ಲೇ ಆರಂಭಿಕ ಬ್ಯಾಟಿಂಗ್ ಜೋಡಿಯನ್ನು ಆಯ್ಕೆ ಮಾಡುವುದು ತಂಡದ ಮುಂದೆ ದೊಡ್ಡ ಸವಾಲಾಗಿದೆ.
ಅಭಿಷೇಕ್ ಶರ್ಮಾ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಅವರ ಜೊತೆಯಾಗಿ ವೈಭವ್ ಸೂರ್ಯವಂಶಿ ಅಥವಾ ಪ್ರಭ್ಸಿಮ್ರನ್ ಸಿಂಗ್ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಹೆಚ್ಚಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಆಡಿರುವ ಪ್ರಭ್ಸಿಮ್ರನ್ಗೆ ಅವಕಾಶ ಸಿಗುವ ಸಾಧ್ಯತೆಯಿದ್ದರೂ, ವೈಭವ್ ಸೂರ್ಯವಂಶಿಯೇ ಮೊದಲ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದ್ದು, ನಾಯಕ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ತಂಡದ ಇನ್ನಿಂಗ್ಸ್ನ್ನು ಮುನ್ನಡೆಸುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಶಿವಂ ದುಬೆ ಮತ್ತು ರಿಂಕು ಸಿಂಗ್ ಪ್ರಮುಖ ಪಾತ್ರ ವಹಿಸಲಿದ್ದು, ಕೊನೆಯ ಓವರ್ಗಳವರೆಗೆ ಕ್ರೀಸ್ನಲ್ಲಿ ಉಳಿದು ತಂಡಕ್ಕೆ ಉತ್ತಮ ಮೊತ್ತ ಕಲೆಹಾಕುವ ಜವಾಬ್ದಾರಿ ಇವರ ಮೇಲಿದೆ.
ಸ್ಪಿನ್ ವಿಭಾಗದಲ್ಲಿ ಹರ್ಷ್ ದುಬೆ ಮತ್ತು ರವಿ ಬಿಷ್ಣೋಯ್ ನಡುವೆ ಪೈಪೋಟಿ ಇದ್ದರೂ, ಮೊದಲ ಪಂದ್ಯದಲ್ಲಿ ಹರ್ಷ್ ದುಬೆಗೆ ಆದ್ಯತೆ ಸಿಗುವ ಸಾಧ್ಯತೆ ಇದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಅಶೋಕ್ ಶರ್ಮಾ, ಯಶ್ ಠಾಕೂರ್ ಮತ್ತು ಪ್ರಿನ್ಸ್ ಯಾದವ್ ಕಣಕ್ಕಿಳಿಯುವ ನಿರೀಕ್ಷೆಯಿದ್ದು, ಮಯಾಂಕ್ ಯಾದವ್ ಕೂಡ ಮತ್ತೊಂದು ಆಯ್ಕೆಯಾಗಿದ್ದಾರೆ.



