ಧಾರ್ಮಿಕಸಾಂಸ್ಕೃತಿಕ

ಶ್ರಾವಣ ಮಾಸದಲ್ಲಿ ‘ಶರಣ ದರ್ಶನ’ ಉಪನ್ಯಾಸ ಮಾಲೆ; ಆಗಸ್ಟ್ 12ರಿಂದ ವಚನೋತ್ಸವ ಪ್ರತಿಷ್ಠಾನದ ವಿಶೇಷ ಕಾರ್ಯಕ್ರಮ

ಒಂದು ತಿಂಗಳ ಕಾಲ ನಗರದ ವಿವಿಧೆಡೆ ಸಂಜೆ ಉಪನ್ಯಾಸಗಳು; ಶರಣ ಸಾಹಿತ್ಯ, ವಚನ ತತ್ವ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಪ್ರಸಾರಕ್ಕೆ ಒತ್ತು

ಕಲಬುರಗಿ, ಆ.7: ಶ್ರಾವಣ ಮಾಸದ ಅಂಗವಾಗಿ ವಚನೋತ್ಸವ ಪ್ರತಿಷ್ಠಾನವು ಆಗಸ್ಟ್ 12ರಿಂದ ಒಂದು ತಿಂಗಳ ಕಾಲ ನಗರದ ವಿವಿಧ ಭಾಗಗಳಲ್ಲಿ ‘ಶರಣ ದರ್ಶನ’ ಉಪನ್ಯಾಸ ಮಾಲೆ ಆಯೋಜಿಸಲು ಸಜ್ಜಾಗಿದೆ. ಶರಣರ ತತ್ವ, ವಚನ ಸಾಹಿತ್ಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ತಿಳಿಸಿದ್ದಾರೆ.

ನಗರದ ಕೆಎಸ್‌ಆರ್‌ಟಿಸಿ ಬಾಲಕಿಯರ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪರೇಷೆಗಳನ್ನು ಅಂತಿಮಗೊಳಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಕುಪೇಂದ್ರ ಪಾಟೀಲ ಸೇರಿದಂತೆ ಪದಾಧಿಕಾರಿಗಳಾದ ಬಸವರಾಜ ಧೂಳಾಗುಂಡಿ, ಬಿ.ಕೆ. ಹಳ್ಳಿ, ಶಿವರಾಜ ಅಂಡಗಿ, ಕಲ್ಯಾಣಪ್ಪ ಬಿರಾದಾರ, ಸಿದ್ರಾಮ ಹಂಚನಾಳ, ವಿನೋದಕುಮಾರ್ ಜನೇವರಿ, ವಿಶ್ವನಾಥ ಮಂಗಳಗಿ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ವೀರಣ್ಣ ತೊರವೆ, ಬಸಯ್ಯ ಸ್ವಾಮಿ ಹಾಗೂ ರುದ್ರಪ್ಪ ಪಾಟೀಲ ಉಪಸ್ಥಿತರಿದ್ದರು.

ಪ್ರತಿದಿನ ನಗರದ ವಿವಿಧ ಪ್ರದೇಶಗಳಲ್ಲಿ ಸಂಜೆ 6.30ಕ್ಕೆ ಉಪನ್ಯಾಸಗಳು ನಡೆಯಲಿದ್ದು, ಅವುಗಳ ಯಶಸ್ವಿ ನಿರ್ವಹಣೆಗೆ ಶಿವರಾಜ ಅಂಡಗಿ ಮತ್ತು ಬಸವರಾಜ ಧೂಳಾಗುಂಡಿ ಅವರನ್ನು ಸಂಚಾಲಕರಾಗಿ ನೇಮಕ ಮಾಡಲಾಗಿದೆ.

ಉಪನ್ಯಾಸ ಮಾಲೆಯ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 12ರಂದು ಸಂಜೆ 6 ಗಂಟೆಗೆ ಎಂ.ಜಿ. ರಸ್ತೆಯ ಜೆಸ್ಕಾಂ ಕಚೇರಿ ಸಮೀಪದ ಜಗನ್ನಾಥ ರಾಚೋಟಿ ಬಯೋಪ್ಲಾಸ್ಮಿಡ್ ಹೆಲ್ತ್‌ಕೇರ್‌ನಲ್ಲಿ ನಡೆಯಲಿದೆ. ಕೆಕೆಎಸ್‌ಐ ಅಧ್ಯಕ್ಷ ಶರಣು ಪಪ್ಪಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಡಾ. ವೀರಣ್ಣ ದಂಡೆ ಅವರು ಮುಖ್ಯ ಉಪನ್ಯಾಸ ನೀಡಲಿದ್ದಾರೆ. ತೇಗನೂರು ಕಾಲೇಜಿನ ಅಧ್ಯಕ್ಷ ರವೀಂದ್ರ ತೇಗನೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಬಿ.ಕೆ. ಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.

ಶ್ರಾವಣ ಮಾಸದ ಅವಧಿಯಲ್ಲಿ ನಡೆಯಲಿರುವ ಈ ಉಪನ್ಯಾಸ ಸರಣಿಯಲ್ಲಿ ಶರಣರ ಜೀವನ ಮೌಲ್ಯಗಳು, ವಚನ ಸಾಹಿತ್ಯದ ಸಂದೇಶಗಳು ಹಾಗೂ ಸಮಾಜಮುಖಿ ಚಿಂತನೆಗಳ ಕುರಿತು ವಿವಿಧ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button