
ಬೀದರ್, ಆ.2: ವ್ಯಸನಮುಕ್ತ ಯುವಜನತೆಯೇ ದೇಶದ ಭವಿಷ್ಯ ಎಂದು ಬಾಲಾಜಿ ಕುಂಬಾರ್ ಹೇಳಿದರು.
ಧೂಮಪಾನ ಹಾಗೂ ತಂಬಾಕು ಮುಕ್ತ ದಿನಾಚರಣೆಯ ಅಂಗವಾಗಿ ಆದಿತ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾಡವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ “ವ್ಯಸನ ಬಿಡಿ – ಜೀವನ ಗೆಲ್ಲಿ” ಘೋಷವಾಕ್ಯದಡಿ ತಂಬಾಕು ಮತ್ತು ವ್ಯಸನಮುಕ್ತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು, ಧೂಮಪಾನ, ಗುಟ್ಕಾ, ಖೈನಿ ಸೇರಿದಂತೆ ವಿವಿಧ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ವ್ಯಸನವು ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲದೆ ಕುಟುಂಬದ ನೆಮ್ಮದಿ ಮತ್ತು ಆರ್ಥಿಕ ಸ್ಥಿತಿಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ಇಂತಹ ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ಅಭಿವ್ಯಕ್ತಿ ಕೌಶಲ್ಯ ಬೆಳೆಸುವ ಉದ್ದೇಶದಿಂದ “ವ್ಯಸನ ಬಿಡಿ – ಜೀವನ ಗೆಲ್ಲಿ” ಹಾಗೂ “ತಂಬಾಕು ಮುಕ್ತ ಸಮಾಜ ನಿರ್ಮಾಣ” ವಿಷಯಗಳ ಕುರಿತು ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವ್ಯಸನದ ದುಷ್ಪರಿಣಾಮಗಳು, ವ್ಯಸನದಿಂದ ಮುಕ್ತವಾಗುವ ಮಾರ್ಗಗಳು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳೊಂದಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ದೇವಿದಾಸ್ ತುಮಕುಂಟೆ ಮಾತನಾಡಿ, ಇಂದಿನ ಯುವಕರು ತಂಬಾಕು ಮತ್ತು ಮಾದಕ ವ್ಯಸನಗಳಷ್ಟೇ ಅಲ್ಲದೆ ಮೊಬೈಲ್ಫೋನ್ಗಳ ಅತಿಯಾದ ಬಳಕೆಯಂತಹ ಡಿಜಿಟಲ್ ವ್ಯಸನಗಳಿಂದಲೂ ದೂರವಿರಬೇಕು ಎಂದು ಸಲಹೆ ನೀಡಿದರು. ಸಮಯವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಳಸೀರಾಮ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಅನಿತಾ, ಶಿಕ್ಷಕರಾದ ಚಂದ್ರಕಾಂತ, ವಸಂತ, ಶ್ರೀಕಾಂತ್, ಲತಾ ಕೋರಿ, ಲತಾ ಕುಲಕರ್ಣಿ, ನಾಜೀಮಾ, ಸುವರ್ಣ, ಸುನೀತಾ, ಆದಿತ್ಯ ಚಾರಿಟೇಬಲ್ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳು “ವ್ಯಸನ ಬಿಡೋಣ – ಆರೋಗ್ಯ ಕಾಪಾಡೋಣ; ಜೀವನ ಗೆಲ್ಲೋಣ – ಸಮಾಜ ಕಟ್ಟೋಣ” ಎಂಬ ಸಂಕಲ್ಪ ಸ್ವೀಕರಿಸಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧತೆ ವ್ಯಕ್ತಪಡಿಸಿದರು.



