ಆ.30ಕ್ಕೆ ಗುರುರಾಯರ ಆರಾಧನಾ ಸಂಭ್ರಮ: ಜೈವೀರ ಹನುಮಾನ್ ಮಂದಿರ ಸಜ್ಜು
ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮ

ಕಲಬುರಗಿ, ಆ.18: ನಗರದ ಕರುಣೇಶ್ವರ ನಗರದಲ್ಲಿರುವ ಶ್ರೀ ಜೈ ಹನುಮಾನ್ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ-2026ರ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಶ್ರೀ ಹನುಮಂತನಿಗೆ ಸಮರ್ಪಿಸಿ, ಮಂಗಳಾರತಿಯೊಂದಿಗೆ ಭಕ್ತಿಭಾವದಿಂದ ಬಿಡುಗಡೆ ಮಾಡಲಾಯಿತು.
ಶ್ರೀ ಜೈವೀರ ಹನುಮಾನ್ ಮಂದಿರದಲ್ಲಿ ಆಗಸ್ಟ್ 30ರಂದು ನಡೆಯಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಾರಾಯಣ, ವಿಶೇಷ ಪೂಜೆ, ಭಜನೆ ಹಾಗೂ ಪಂಡಿತ್ ಅಭಯಾಚಾರ್ಯ ಅವರ ಪ್ರವಚನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಶ್ರೀ ಜೈ ಹನುಮಾನ್ ಮಂದಿರದ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ವಿನುತಕುಮಾರ್ ಜೋಶಿ, ವಿಶ್ವಾಸ್ ಮೊಘೇಕರ್, ವಿನೋದ ಸಾತಖೇಡ, ಕೃಷ್ಣ ಸುರಪುರ, ಅರ್ಚಕ ವೆಂಕಟೇಶಾಚಾರ್ಯ ನೆಲೋಗಿ, ವ್ಯವಸ್ಥಾಪಕ ಚಂದ್ರಕಾಂತ ಕಡಗಂಚಿ, ಪಾರಾಯಣ ಸಂಘದ ಸದಸ್ಯರು, ಭಕ್ತರು ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಆರಾಧನಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಆಯೋಜಕರು ಮನವಿ ಮಾಡಿದರು.



