ಬೌದ್ಧ ತತ್ವಗಳನ್ನು ರಂಗಭೂಮಿಗೆ ತಂದ ಅಪರೂಪದ ಸಾಧನೆ: ಡಾ. ಈಶ್ವರ ಇಂಗನ್ಗೆ ಮೆಚ್ಚುಗೆ
ಹತ್ತು ಬೌದ್ಧ ನಾಟಕಗಳ ಕುರಿತು ಉಪನ್ಯಾಸ–ಸಂವಾದ; ವೈಚಾರಿಕ ರಂಗಭೂಮಿಯ ಅಗತ್ಯವನ್ನು ಒತ್ತಿಹೇಳಿದ ಗಣ್ಯರು

ಕಲಬುರಗಿ, ಜು.30: ಬೌದ್ಧ ಧರ್ಮದ ವೈಚಾರಿಕ ಮತ್ತು ತತ್ವಶಾಸ್ತ್ರೀಯ ವಿಚಾರಗಳನ್ನು ಸೃಜನಾತ್ಮಕವಾಗಿ ರಂಗಭೂಮಿಗೆ ತರುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಇಂತಹ ಸವಾಲಿನ ನಡುವೆಯೂ ಲೇಖಕ ಡಾ. ಈಶ್ವರ ಎಂ. ಇಂಗನ್ ಅವರು ಬೌದ್ಧ ತತ್ವಗಳನ್ನು ಒಳಗೊಂಡ ಹತ್ತು ನಾಟಕಗಳನ್ನು ರಚಿಸಿರುವುದು ಕನ್ನಡ ರಂಗಭೂಮಿಯಲ್ಲೇ ಪ್ರಥಮ ಹಾಗೂ ಅಪರೂಪದ ಪ್ರಯತ್ನವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಲಯದ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಹೇಳಿದರು.
ನಗರದ ಕರ್ನಾಟಕ ರಂಗಾಯಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ, ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಡಾ. ಈಶ್ವರ ಎಂ. ಇಂಗನ್ ಅವರ ಹತ್ತು ಬೌದ್ಧ ನಾಟಕಗಳ ಕುರಿತು ಉಪನ್ಯಾಸ ಮತ್ತು ಸಂವಾದ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೌದ್ಧ ಧರ್ಮದ ತತ್ವಗಳನ್ನು ಇಷ್ಟೊಂದು ವ್ಯಾಪಕವಾಗಿ ನಾಟಕ ರೂಪದಲ್ಲಿ ಕಟ್ಟಿಕೊಟ್ಟ ಕೀರ್ತಿ ಡಾ. ಈಶ್ವರ ಎಂ. ಇಂಗನ್ ಅವರಿಗೆ ಸಲ್ಲುತ್ತದೆ ಎಂದು ಅವರು ಶ್ಲಾಘಿಸಿದರು.
ಕಲಬುರಗಿ ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಷಿ ಮಾತನಾಡಿ, ಇಂಗನ್ ಅವರ ನಾಟಕಗಳು ಚಾರಿತ್ರಿಕ ಅಂಶಗಳನ್ನು ತಾತ್ವಿಕ ದೃಷ್ಟಿಕೋನದಿಂದ ವಿಶ್ಲೇಷಿಸುವುದರ ಜೊತೆಗೆ ಸಮಕಾಲೀನ ಸಮಾಜದ ಸಂಗತಿಗಳಿಗೆ ಸ್ಪಂದಿಸುವ ರೀತಿಯಲ್ಲಿ ರೂಪುಗೊಂಡಿವೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ನಾಟಕವು ಅಭಿನಯ, ಸಂಭಾಷಣೆ, ಸಂಗೀತ, ನೃತ್ಯ ಹಾಗೂ ರಂಗಸಜ್ಜಿಕೆಗಳ ಸಮನ್ವಯ ಹೊಂದಿರುವ ಸಂಕೀರ್ಣ ಕಲಾಮಾಧ್ಯಮವಾಗಿದೆ. ಇಂತಹ ಮಾಧ್ಯಮದಲ್ಲಿ ಹತ್ತು ಬೌದ್ಧ ನಾಟಕಗಳನ್ನು ಸಾಹಿತ್ಯಿಕವಾಗಿ ಯಶಸ್ವಿಯಾಗಿ ರೂಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಕರ್ನಾಟಕ ರಂಗಾಯಣ ಕಲಬುರಗಿಯ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಇಂದಿನ ಸಂದರ್ಭದಲ್ಲಿ ಬೌದ್ಧ ಮತ್ತು ವಚನ ಸಾಹಿತ್ಯ ಆಧಾರಿತ ವೈಚಾರಿಕ ಹಾಗೂ ಪ್ರಗತಿಪರ ನಾಟಕಗಳು ಜನಸಾಮಾನ್ಯರನ್ನು ತಲುಪಬೇಕಾದ ಅಗತ್ಯವಿದೆ. ಯುವ ರಂಗಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಡಾ. ಇಂಗನ್ ಅವರ ಬದ್ಧತೆ ಶ್ಲಾಘನೀಯವಾಗಿದೆ ಎಂದರು.
ನಾಟಕಗಳ ಲೇಖಕ ಡಾ. ಈಶ್ವರ ಎಂ. ಇಂಗನ್ ಮಾತನಾಡಿ, ಬೌದ್ಧ ವಿಹಾರದ ಗ್ರಂಥಾಲಯದಲ್ಲಿದ್ದ ಬುದ್ಧನ ಜೀವನ ಚರಿತ್ರೆ ಹಾಗೂ ಬೌದ್ಧ ಮಹಿಳೆಯರ ಕುರಿತ ಕಥೆಗಳು ತಮ್ಮ ನಾಟಕ ರಚನೆಗೆ ಪ್ರೇರಣೆಯಾದವು. ಸಹೋದರ ಪ್ರೊ. ಎಚ್.ಟಿ. ಪೋತೆ ಅವರ ಮಾರ್ಗದರ್ಶನ ಹಾಗೂ ಮಿತ್ರರ ಸಲಹೆ-ಸಹಕಾರದಿಂದ ಒಟ್ಟು ಹತ್ತು ನಾಟಕಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ತಮ್ಮ ಸಾಹಿತ್ಯಿಕ ಪಯಣವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಎಚ್.ಟಿ. ಪೋತೆ, ಕರ್ನಾಟಕ ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ, ಎಂ.ಬಿ. ಕಟ್ಟಿ, ಡಾ. ಶೈಲಜಾ ಬಾಗೇವಾಡಿ, ಸಂತೋಷ ಕಂಬಾರ, ನಾರಾಯಣ ಕುಲಕರ್ಣಿ, ಅರುಣ್ ಜೋಳದಕೂಡ್ಲಿಗಿ, ಸೂರ್ಯಕಾಂತ ಸುಜ್ಯಾತ, ಪ್ರೊ. ವಸಂತ ನಾಸಿ ಹಾಗೂ ರಂಗಾಯಣದ ರೆಪರ್ಟರಿ ಕಲಾವಿದರು ಉಪಸ್ಥಿತರಿದ್ದರು.



