ರಾಜ್ಯ

ಉದ್ಘಾಟನೆಗೂ ಮುನ್ನವೇ ವಸತಿ ನಿಲಯ ಕಟ್ಟಡದಲ್ಲಿ ಬಿರುಕು; ಕಳಪೆ ಕಾಮಗಾರಿ ಆರೋಪ

₹5–6 ಕೋಟಿ ವೆಚ್ಚದ ಬಾಲಕರ ವಸತಿ ನಿಲಯ ನಿರ್ಮಾಣದ ಗುಣಮಟ್ಟದ ಬಗ್ಗೆ ಪ್ರಶ್ನೆ; ಸ್ವತಂತ್ರ ತಾಂತ್ರಿಕ ತನಿಖೆಗೆ ಸಾರ್ವಜನಿಕರ ಆಗ್ರಹ

ಉದ್ಘಾಟನೆಗೂ ಮುನ್ನವೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಾಲಕರ ವಸತಿ ನಿಲಯ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಬಿರುಕು ಬಿದ್ದ ಭಾಗಗಳಿಗೆ ಪ್ಲಾಸ್ಟರ್ ಹಾಕಿ ಮುಚ್ಚಲು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಸಮೀಪ ಕೆಆರ್‌ಐಡಿಎಲ್ (KRIDL) ಮೂಲಕ ಸುಮಾರು ₹5ರಿಂದ ₹6 ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ಕಟ್ಟಡ ಸಂಪೂರ್ಣವಾಗಿ ಪೂರ್ಣಗೊಳ್ಳುವ ಮುನ್ನವೇ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ.

ಪ್ರಕರಣ ಬಹಿರಂಗವಾದ ಬಳಿಕ ಬಿರುಕು ಬಿದ್ದ ಗೋಡೆಗಳಿಗೆ ಪ್ಲಾಸ್ಟರ್ ಹಾಕಿ ದುರಸ್ತಿ ಮಾಡುವ ಕೆಲಸ ನಡೆದಿರುವುದಾಗಿ ತಿಳಿದುಬಂದಿದೆ. ಆದರೆ ಕೆಲವೇ ದಿನಗಳಲ್ಲಿ ಕಟ್ಟಡದ ಇತರೆ ಭಾಗಗಳಲ್ಲಿಯೂ ಮತ್ತೆ ಬಿರುಕುಗಳು ಕಾಣಿಸಿಕೊಂಡಿದ್ದು, ಕಳಪೆ ಕಾಮಗಾರಿ ನಡೆದಿರುವ ಆರೋಪ ಮತ್ತಷ್ಟು ಬಲಗೊಂಡಿದೆ.

ಕಟ್ಟಡದ ಸುರಕ್ಷತೆ ಹಾಗೂ ನಿರ್ಮಾಣದ ಗುಣಮಟ್ಟವನ್ನು ಸ್ವತಂತ್ರ ತಾಂತ್ರಿಕ ತಜ್ಞರಿಂದ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಹಾಗೂ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕಟ್ಟಡದ ಸುರಕ್ಷತೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button