ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಿನಿಮೀಯ ರೀತಿಯಲ್ಲಿ ಮೂವರು ಕೈದಿಗಳ ಪರಾರಿ
ಗೋಡೆ ಹಾರಿ ಪರಾರಿಯಾದ ಕೊಲೆ ಮತ್ತು ಪೋಕ್ಸೋ ಪ್ರಕರಣದ ಆರೋಪಿಗಳು; ಬಂಧನಕ್ಕೆ ಮೂರು ವಿಶೇಷ ಪೊಲೀಸ್ ತಂಡಗಳ ರಚನೆ

ಕಲಬುರಗಿ, ಜುಲೈ 14: ಕಲಬುರಗಿ ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಬೀದರ್–ಶ್ರೀರಂಗಪಟ್ಟಣ ಹೆದ್ದಾರಿ ಸಮೀಪದ ಕೇಂದ್ರ ಕಾರಾಗೃಹದಿಂದ ಮೂವರು ವಿಚಾರಣಾಧೀನ ಕೈದಿಗಳು ಸಿನಿಮೀಯ ರೀತಿಯಲ್ಲಿ ಗೋಡೆ ಹಾರಿ ಪರಾರಿಯಾಗಿರುವ ಘಟನೆ ಭಾರಿ ಸಂಚಲನ ಮೂಡಿಸಿದೆ. ಇತ್ತೀಚೆಗೆ ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೋ ಪ್ರಕರಣದ ಆರೋಪಿ ಪರಾರಿಯಾಗಿದ್ದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪರಾರಿಯಾದವರನ್ನು ಮಸ್ತಾನ್ (ಇಸ್ಲಾಂಪುರ, ಬಸವಕಲ್ಯಾಣ), ಸಂತೋಷ್ (ಸಂತಪುರ, ಔರಾದ್ ತಾಲ್ಲೂಕು) ಹಾಗೂ ಸಾಗರ್ (ಬೀದರ್ ತಾಲ್ಲೂಕು) ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಪೋಕ್ಸೋ ಪ್ರಕರಣದ ಆರೋಪಿ ಹಾಗೂ ಉಳಿದ ಇಬ್ಬರು ಕೊಲೆ ಪ್ರಕರಣಗಳ ಆರೋಪಿಗಳಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೈದಿಗಳು ಜೈಲಿನ ಬ್ಯಾರಕ್ನ ಕಬ್ಬಿಣದ ಕಂಬಿಗಳನ್ನು ಕತ್ತರಿಸಿ, ಟವೆಲ್, ಬೆಡ್ಶೀಟ್ ಹಾಗೂ ಬಟ್ಟೆಗಳನ್ನು ಕಟ್ಟಿ ಹಗ್ಗದಂತೆ ಬಳಸಿಕೊಂಡು ಸುಮಾರು 15ರಿಂದ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ಏರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪರಾರಿಯ ನಂತರ ಜೈಲಿನ ಹೊರಭಾಗದಲ್ಲಿ ವಾಹನ ಸಿದ್ಧವಾಗಿತ್ತು ಎಂಬ ಅನುಮಾನವೂ ವ್ಯಕ್ತವಾಗಿದ್ದು, ಈ ಪ್ರಕರಣದಲ್ಲಿ ಹೊರಗಿನವರ ಸಹಕಾರವಿದೆಯೇ ಎಂಬ ದೃಷ್ಟಿಯಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೈದಿಗಳು ಹಲವು ದಿನಗಳಿಂದಲೇ ಪರಾರಿಯ ಸಂಚು ರೂಪಿಸಿದ್ದಾರೆಯೇ, ಜೈಲಿನೊಳಗಿನ ಭದ್ರತಾ ಲೋಪ ಇದಕ್ಕೆ ಕಾರಣವೇ ಎಂಬ ಪ್ರಶ್ನೆಗಳು ಕೂಡ ಉದ್ಭವಿಸಿವೆ.
ಘಟನೆ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೈಲಿನ ವಿವಿಧ ಭಾಗಗಳು ಹಾಗೂ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಪರಾರಿಯಾದ ಕೈದಿಗಳ ಪತ್ತೆಗೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., “ಐದನೇ ಬ್ಯಾರಕ್ನಿಂದ ಮೂವರು ಕೈದಿಗಳು ಗೋಡೆ ಹಾರಿ ಪರಾರಿಯಾಗಿದ್ದಾರೆ. ಅವರನ್ನು ಶೀಘ್ರವೇ ಬಂಧಿಸಲು ವಿಶೇಷ ತಂಡಗಳು ಕಾರ್ಯಾಚರಣೆ ಆರಂಭಿಸಿವೆ. ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.
ಗಮನಾರ್ಹವಾಗಿ, ಇದೇ ಕೇಂದ್ರ ಕಾರಾಗೃಹದಿಂದ 2015ರಲ್ಲಿಯೂ ಇಬ್ಬರು ಕೈದಿಗಳು ಪರಾರಿಯಾಗಿದ್ದ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಪೊಲೀಸರು ಅವರನ್ನು ನಂತರ ಬಂಧಿಸಿದ್ದರು. ಇದೀಗ ಮತ್ತೊಮ್ಮೆ ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡಿರುವುದು ಕಾರಾಗೃಹದ ಭದ್ರತಾ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



