ಸಿದ್ದಾರ್ಥ ವಿಹಾರ ಟ್ರಸ್ಟ್ ದಾಖಲೆ ನೀಡಲಿ: ಆರ್ಎಸ್ಎಸ್, ರಾಮಮಂದಿರ ಲೆಕ್ಕ ಕೊಡಿ: ಬಿಜೆಪಿಗೆ ಸಚಿವ ಖರ್ಗೆ ಸವಾಲು
ಭೂ ಅಕ್ರಮ ಆರೋಪದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ; ಬಿಜೆಪಿಯು ಮೂಲ ಪ್ರಶ್ನೆಗಳಿಗೆ ಉತ್ತರಿಸಲಿ ಎಂದ ಪ್ರಿಯಾಂಕ್ ಖರ್ಗೆ

ಕಲಬುರಗಿ, ಆ.14: ಸಿದ್ದಾರ್ಥ ವಿಹಾರ ಟ್ರಸ್ಟ್ ವಿರುದ್ಧ ಭೂ ಅಕ್ರಮದ ಆರೋಪ ಮಾಡಿರುವ ಬಿಜೆಪಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ತಮ್ಮ ಕುಟುಂಬದ ಅಧೀನದಲ್ಲಿರುವ ಟ್ರಸ್ಟ್ನ ಎಲ್ಲ ಆರ್ಥಿಕ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಇಡಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಇದೇ ವೇದಿಕೆಯಲ್ಲಿ ಆರ್ಎಸ್ಎಸ್ ಹಾಗೂ ಅಯೋಧ್ಯೆಯ ರಾಮಮಂದಿರದ ಲೆಕ್ಕಪತ್ರಗಳನ್ನೂ ಬಹಿರಂಗಪಡಿಸಲು ಬಿಜೆಪಿ ಸಿದ್ಧವಿದೆಯೇ ಎಂದು ಅವರು ನೇರ ಸವಾಲು ಹಾಕಿದ್ದಾರೆ.
ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಸಂಬಂಧಿಸಿದ ಭೂ ಅಕ್ರಮದ ಆರೋಪದ ಕುರಿತು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿರುವ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯವು ಪ್ರಕರಣದ ತನಿಖೆಗೆ ಆದೇಶಿಸಿದೆ ಎಂದು ಹೇಳಿ, ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಖರ್ಗೆ ಕುಟುಂಬವನ್ನು ಗುರಿಯಾಗಿಸಿಕೊಂಡು ಪೋಸ್ಟ್ ಹಂಚಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಕುರಿತು ಬಹಿರಂಗ ಚರ್ಚೆಗೆ ತಾವು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಸಿದ್ದಾರ್ಥ ವಿಹಾರ ಟ್ರಸ್ಟ್ ಸಂಪೂರ್ಣ ನಿಯಮಾನುಸಾರ ನೋಂದಾಯಿತ ಸಂಸ್ಥೆಯಾಗಿದ್ದು, ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಕ್ಕೆ ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದು, ಟ್ರಸ್ಟ್ನ ಪ್ರತಿಯೊಂದು ಲೆಕ್ಕಪತ್ರದೊಂದಿಗೆ ಸಾರ್ವಜನಿಕರ ಮುಂದೆ ಚರ್ಚೆಗೆ ಬರಲು ಸಿದ್ಧವಿರುವುದಾಗಿ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿರುವ ಅವರು, ತಮ್ಮ ಟ್ರಸ್ಟ್ನ ಲೆಕ್ಕ ಕೇಳುವ ಬಿಜೆಪಿ, ಆರ್ಎಸ್ಎಸ್ನ ಆರ್ಥಿಕ ಚಟುವಟಿಕೆಗಳು ಹಾಗೂ ಹಣದ ಮೂಲಗಳ ಬಗ್ಗೆ ಸಾರ್ವಜನಿಕವಾಗಿ ಲೆಕ್ಕ ನೀಡಲು ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದಾರೆ. ಆರ್ಎಸ್ಎಸ್ ಅಧಿಕೃತವಾಗಿ ನೋಂದಾಯಿತ ಸಂಸ್ಥೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರಗಳು ಮತ್ತು ಲೆಕ್ಕಪತ್ರಗಳನ್ನು ಸಾರ್ವಜನಿಕ ಪರಿಶೀಲನೆಗೆ ಬಿಡುಗಡೆ ಮಾಡಲು ಬಿಜೆಪಿ ಸಿದ್ಧವಿದೆಯೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ. “ನಮ್ಮ ಲೆಕ್ಕ ಕೇಳುವ ನೀವು, ಶ್ರೀರಾಮನ ಲೆಕ್ಕ ಕೇಳಿದರೆ ಏಕೆ ಪ್ರಶ್ನಿಸುತ್ತೀರಿ?” ಎಂಬ ರೀತಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವರು, ತಮ್ಮ ಟ್ರಸ್ಟ್ನ ಆದಾಯದ ಮೂಲಗಳು ಹಾಗೂ ಲೆಕ್ಕಪತ್ರಗಳನ್ನು ಸಾರ್ವಜನಿಕರ ಮುಂದೆ ಇಡಲು ತಾವು ಸಿದ್ಧ ಎಂದು ಹೇಳಿದ್ದಾರೆ.
ಆರ್ಎಸ್ಎಸ್ನ ಕಾನೂನುಬದ್ಧ ಅಸ್ತಿತ್ವ ಹಾಗೂ ಅದರ ನಿಧಿ ಸಂಗ್ರಹದ ಮೂಲಗಳ ಬಗ್ಗೆ ತಾವು ಹಿಂದಿನಿಂದಲೂ ಪ್ರಶ್ನಿಸುತ್ತಾ ಬಂದಿರುವುದಾಗಿ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಆರ್ಎಸ್ಎಸ್ ಅಧಿಕೃತವಾಗಿ ನೋಂದಾಯಿತವಾಗಿಲ್ಲ ಎಂಬುದಾಗಿ ಆರೋಪಿಸಿರುವ ಅವರು, ಅದರ ಹಣಕಾಸು ವ್ಯವಹಾರಗಳು ಸಾರ್ವಜನಿಕ ಪರಿಶೀಲನೆಗೆ ಏಕೆ ಲಭ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
“ಸಿದ್ದಾರ್ಥ ವಿಹಾರ ಟ್ರಸ್ಟ್ ಪಾರದರ್ಶಕವಾಗಿ ತೆರಿಗೆ ಪಾವತಿಸುವ ಸಂಸ್ಥೆಯಾಗಿದೆ. ಆದರೆ ಬಿಜೆಪಿ ಉತ್ತರಿಸಬೇಕಾದ ಮೂಲಭೂತ ಪ್ರಶ್ನೆಗಳು ಇನ್ನೂ ಬಾಕಿ ಇವೆ. ಆರ್ಎಸ್ಎಸ್ ಯಾವಾಗ ನೋಂದಣಿಯಾಗುತ್ತದೆ? ಅದರ ಆರ್ಥಿಕ ಚಟುವಟಿಕೆಗಳು ಹಾಗೂ ಹಣದ ಮೂಲಗಳ ಬಗ್ಗೆ ದಾಖಲೆಗಳೊಂದಿಗೆ ಯಾವಾಗ ಸಾರ್ವಜನಿಕವಾಗಿ ಚರ್ಚಿಸುತ್ತೀರಿ?” ಎಂದು ಸಚಿವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.



