ಕಬ್ಬಿಗೆ ಟನ್ಗೆ ₹900 ಹೆಚ್ಚುವರಿ ಸೇರಿಸಿ ₹5,000 ಬೆಂಬಲ ಬೆಲೆ ಘೋಷಣೆಗೆ ಆಗ್ರಹ
ಕಬ್ಬು ಬೆಳೆಗಾರರ ಹಿತ ಕಾಪಾಡಲು ಎಸ್ಎಪಿ ಜಾರಿ ಮಾಡಬೇಕು: ಶರಣಬಸಪ್ಪ ಮಮಶೆಟ್ಟಿ

ಕಲಬುರಗಿ, ಆ.27- ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಎಸ್ಎಪಿ (ರಾಜ್ಯ ಸಲಹಾ ಬೆಲೆ) ಜಾರಿಗೊಳಿಸಿ, ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ₹900 ನಿಗದಿಪಡಿಸುವ ಮೂಲಕ ಒಟ್ಟು ₹5,000 ಬೆಂಬಲ ಬೆಲೆ ಘೋಷಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ2+50 ಸೇರಿಸಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾಯ್ದೆ ಜಾರಿಗೊಳಿಸಬೇಕು. ಸಕ್ಕರೆ ಕಾರ್ಖಾನೆಗಳ ಮುಖ್ಯ ಗೇಟ್ಗಳ ಬಳಿ ತೂಕದ ಮಾಪನ ವ್ಯವಸ್ಥೆ ಅಳವಡಿಸಿ, ರೈತರ ಕಣ್ಣೆದುರೇ ಕಬ್ಬಿನ ಗಾಡಿಗಳನ್ನು ತೂಕ ಮಾಡಿಸಿ ಕಾರ್ಖಾನೆಗಳಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಸಕ್ಕರೆ ಬೆಲೆ ಏರಿಕೆಯಾದರೂ ಅದರ ಲಾಭ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ. ಆದರೆ ಕಬ್ಬು ಬೆಳೆಗಾರರಿಗೆ ಮಾತ್ರ ಸೂಕ್ತ ಬೆಲೆ ದೊರೆಯುತ್ತಿಲ್ಲ. ಸುಮಾರು 12 ತಿಂಗಳ ಕಾಲ ಕಬ್ಬು ನಾಟಿ ಮಾಡಿ, ರಸಗೊಬ್ಬರ, ನೀರು, ಕೂಲಿ ಸೇರಿದಂತೆ ಸಾಕಷ್ಟು ಖರ್ಚು ಮಾಡಿ ಬೆಳೆಸಿದ ರೈತರಿಗೆ ಬೆಂಬಲ ಬೆಲೆ ನೀಡುವ ಕುರಿತು ಸರ್ಕಾರ ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಭಾರತ ಎರಡನೇ ಸ್ಥಾನದಲ್ಲಿದ್ದು, ದೇಶದಲ್ಲಿ ಸುಮಾರು ಐದು ಕೋಟಿ ಕಬ್ಬು ಬೆಳೆಗಾರರಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಕಬ್ಬು ಬೆಳೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಒಂದು ಟನ್ ಕಬ್ಬು ಬೆಳೆಯಲು ಸುಮಾರು ₹3,500 ವೆಚ್ಚವಾಗುತ್ತಿದ್ದು, ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ರೈತರಿಗೆ ಟನ್ಗೆ ಕನಿಷ್ಠ ₹5,000 ಬೆಲೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ, ಬಿತ್ತನೆ ಕಬ್ಬು, ಕೃಷಿ ಕೂಲಿ ಹಾಗೂ ಉಳುಮೆ ವೆಚ್ಚ ಹೆಚ್ಚಾಗಿರುವುದರಿಂದ ಕಬ್ಬು ಬೆಳೆಯುವ ರೈತರ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಗುಜರಾತ್ನಲ್ಲಿ ಟನ್ಗೆ ₹4,400, ಪಂಜಾಬ್ನಲ್ಲಿ ₹3,800 ಹಾಗೂ ಉತ್ತರ ಪ್ರದೇಶದಲ್ಲಿ ₹3,500ರಷ್ಟು ಬೆಲೆ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಹಲವು ಸಕ್ಕರೆ ಕಾರ್ಖಾನೆಗಳು ಕೂಡ ₹3,500ಕ್ಕಿಂತ ಹೆಚ್ಚಿನ ಬೆಲೆ ನೀಡುತ್ತಿವೆ ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳ ಪೀಠದ ಆದೇಶದಂತೆ ಎಸ್ಎಪಿ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದ್ದು, ಅದನ್ನು ಬಳಸಿಕೊಂಡು ಪ್ರತಿ ಟನ್ ಕಬ್ಬಿಗೆ ₹900 ಹೆಚ್ಚುವರಿ ಬೆಲೆ ಘೋಷಿಸಬೇಕು ಎಂದು ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದರು.
ಕಬ್ಬಿನ ಉಪ ಉತ್ಪನ್ನಗಳ ಲಾಭ ರೈತರಿಗೆ ನೀಡಲಿ
ಒಂದು ಟನ್ ಕಬ್ಬಿನ ಸಕ್ಕರೆ ಇಳುವರಿ ಆಧಾರದ ಮೇಲೆ ₹5,000 ಬೆಲೆ ನಿಗದಿಪಡಿಸಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಬೆಂಬಲ ಬೆಲೆ ಜಾರಿಗೊಳಿಸುವುದರ ಜೊತೆಗೆ 12 ತಿಂಗಳೊಳಗೆ ಕಬ್ಬು ಕಟಾವು ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಕಬ್ಬಿನಿಂದ ದೊರೆಯುವ ಮೊಲಾಸಿಸ್, ಕಾಕಂಬಿ, ಎಥೆನಾಲ್, ಡಿಸ್ಟಿಲರಿ, ಸಹ ವಿದ್ಯುತ್, ಜೈವಿಕ ಗೊಬ್ಬರ, ಪಶು ಆಹಾರ, ಬಗಾಸ್ ಸೇರಿದಂತೆ ವಿವಿಧ ಉಪ ಉತ್ಪನ್ನಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ದೊರೆಯುವ ಲಾಭದಲ್ಲಿ ರೈತರಿಗೆ ಪಾಲು ನೀಡಬೇಕು ಎಂದು ಒತ್ತಾಯಿಸಿದರು.
ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ನಡುವೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಸಮಿತಿ ರಚಿಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ಕರ್ನಾಟಕ ಕಬ್ಬು ಖರೀದಿ ಮತ್ತು ಪೂರೈಕೆ ನಿಯಂತ್ರಣ ಕಾಯ್ದೆ 2013 ಹಾಗೂ ತಿದ್ದುಪಡಿ ಕಾಯ್ದೆ 2014ರ ಕಲಂ 4(ಎ) ಅಡಿಯಲ್ಲಿ ಇರುವ ಅಧಿಕಾರ ಬಳಸಿಕೊಂಡು ಕೇಂದ್ರ ಸರ್ಕಾರದ ಎಫ್ಆರ್ಪಿ ದರಕ್ಕಿಂತ ಹೆಚ್ಚುವರಿಯಾಗಿ ಕಬ್ಬಿಗೆ ಬೆಲೆ ನಿಗದಿಪಡಿಸಬೇಕು ಎಂದು ಹೇಳಿದರು.
ರೈತರ ಸಮ್ಮುಖದಲ್ಲಿ ಸಕ್ಕರೆ ಇಳುವರಿ ಘೋಷಣೆಯಲ್ಲಿ ಕಂಡುಬರುವ ಲೋಪಗಳನ್ನು ಸರಿಪಡಿಸಲು ಕೃಷಿ ವಿಶ್ವವಿದ್ಯಾಲಯ ಹಾಗೂ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ತಜ್ಞರ ಸಮಿತಿ ರಚಿಸಬೇಕು. ವಾಸ್ತವಿಕ ಇಳುವರಿ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ತೂಕದಲ್ಲಿ ನಡೆಯುತ್ತಿರುವ ಮೋಸವನ್ನು ತಡೆಯಲು ಅಳತೆ ಮತ್ತು ತೂಕ ಮಾಪನ ಇಲಾಖೆಯ ಅಧಿಕಾರಿಗಳು ಸಕ್ಕರೆ ಕಾರ್ಖಾನೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೋಂದಾಯಿತ ಕಬ್ಬು ಬೆಳೆಗಾರರ ಜೇಷ್ಠತೆ ಆಧಾರದ ಮೇಲೆ ಉಪವಿಭಾಗದ ಕಚೇರಿಯಲ್ಲಿ ಕಟಾವು ಅನುಮತಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ ಭೂಮಿಗೆ ಹೊಂದಿಕೊಳ್ಳುವ ಕಬ್ಬಿನ ತಳಿ ನಾಟಿ ಮಾಡಲು ರೈತರಿಗೆ ಮುಕ್ತ ಅವಕಾಶ ನೀಡಬೇಕು. ಎಥೆನಾಲ್ ಪ್ರಮಾಣವನ್ನು ಶೇ.25ಕ್ಕೆ ಹೆಚ್ಚಿಸುವುದು, ಪರ್ಮಿಟ್, ಕಟಾವು ಹಾಗೂ ಸಾಗಾಣಿಕೆ ಸಂದರ್ಭದ ತೊಂದರೆಗಳನ್ನು ನಿವಾರಿಸುವುದು, ದುಬಾರಿ ಕಟಾವು ಮತ್ತು ಸಾಗಾಣಿಕೆ ವೆಚ್ಚಕ್ಕೆ ಕಡಿವಾಣ ಹಾಕುವುದು ಹಾಗೂ ರೈತರಿಗೆ ಮಡ್ಡಿ ಮತ್ತು ಬೂದಿಯನ್ನು ಉಚಿತವಾಗಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ದಪ್ಪ ಕಲಶೆಟ್ಟಿ, ದೇವರು ಬಿರಾದಾರ, ಕರೆಪ್ಪ ಕರಗೊಂಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



