ಆರೋಗ್ಯಜಿಲ್ಲಾಸುದ್ದಿ

ಪ್ರೊವಿಫೈ ಸಕ್ರಿಯಗೊಳಿಸಿದ ಸಿರಿಧಾನ್ಯ ಉತ್ಪನ್ನಗಳ ಬಿಡುಗಡೆ

ಸಾಂಪ್ರದಾಯಿಕ ಸಿರಿಧಾನ್ಯಗಳನ್ನು ಆಧುನಿಕ ಪೌಷ್ಟಿಕತೆಗೆ ಪರಿಚಯಿಸುವ ವಿನೂತನ ಪ್ರಯತ್ನ

ಕಲಬುರಗಿ, ಅ.26: ಗ್ರಾಹಕರಿಗೆ ಸುಲಭವಾಗಿ ಹಾಗೂ ಅನುಕೂಲಕರವಾಗಿ ತಲುಪಿಸುವ ಉದ್ದೇಶದಿಂದ ಮೂವರು ಯುವ ಉದ್ಯಮಿಗಳು ಸಿದ್ಧಪಡಿಸಿರುವ ಪ್ರೊವಿಫೈ ಸಂಸ್ಥೆಯ ಸಕ್ರಿಯಗೊಳಿಸಿದ ಸಿರಿಧಾನ್ಯ ಉತ್ಪನ್ನಗಳು ಪೌಷ್ಟಿಕಾಂಶಭರಿತವಾಗಿವೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಹೇಳಿದರು.

ನಗರದ ಗಾಜೀಪುರ ಪ್ರದೇಶದಲ್ಲಿರುವ ಕೃಷಿಕಲ್ಪ ಕಚೇರಿಯಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಪ್ರೊವಿಫೈ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ವೈಜ್ಞಾನಿಕವಾಗಿ ಸಂಸ್ಕರಿಸಿದ ನವಣೆ, ಊದಲು, ಸಾಮೆ, ಹಾರಕಾ ಹಾಗೂ ಕೊರಲೆ ಸಿರಿಧಾನ್ಯ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬದಲಾಗುತ್ತಿರುವ ಜೀವನಶೈಲಿ ಹಾಗೂ ಆರೋಗ್ಯಕರ ಆಹಾರದ ಕುರಿತು ಜನರಲ್ಲಿ ಹೆಚ್ಚುತ್ತಿರುವ ಅರಿವಿನ ಹಿನ್ನೆಲೆಯಲ್ಲಿ ಪೌಷ್ಟಿಕಾಂಶಭರಿತ ಸಾಂಪ್ರದಾಯಿಕ ಆಹಾರಗಳನ್ನು ಆಧುನಿಕ ರೀತಿಯಲ್ಲಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಯುವ ಉದ್ಯಮಿಗಳ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹೂಡಿಕೆ ಹಾಗೂ ಬಂಡವಾಳ ಹರಿದುಬರಲು ರಾಜ್ಯ ಸರ್ಕಾರವು ‘ಎಲಿವೇಟ್ ಕರ್ನಾಟಕ’ ಮತ್ತು ‘ಲೀಪ್’ ಯೋಜನೆಗಳನ್ನು ಜಾರಿಗೊಳಿಸಿದೆ. ಬೆಂಗಳೂರು ಹೊರತುಪಡಿಸಿ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವುದು ಇದರ ಉದ್ದೇಶವಾಗಿದೆ. ‘ಎಲಿವೇಟ್ ಕರ್ನಾಟಕ’ ಯೋಜನೆಯಡಿ ಯುವ ಉದ್ಯಮಿಗಳಿಗೆ ಸರ್ಕಾರ ಸಹಾಯಧನ ನೀಡುತ್ತಿದ್ದು, ನವೋದ್ಯಮಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ವಿನೂತನ ಹೆಜ್ಜೆ ಇಟ್ಟಿರುವ ಯುವ ಉದ್ಯಮಿಗಳಾದ ಪ್ರಶಾಂತ್ ಎಸ್. ಬೆಳ್ಳೆರಿಮಠ್, ಮಹೇಶ್ ವಿ. ಪಾಟೀಲ್ ಹಾಗೂ ನಾಗರಾಜ ಮರಲಿಂಗಣ್ಣವರ ಅವರ ಪ್ರಯತ್ನವನ್ನು ಶ್ಲಾಘಿಸಿದ ಅವರು, ಉತ್ಪನ್ನಗಳ ತಯಾರಿಕೆ, ತರಬೇತಿ ಹಾಗೂ ಮಾರುಕಟ್ಟೆ ಕೌಶಲ್ಯಕ್ಕೆ ಮಾರ್ಗದರ್ಶನ ನೀಡುತ್ತಿರುವ ಕೃಷಿಕಲ್ಪ ಸಂಸ್ಥೆಯ ಕಾರ್ಯವೂ ಮೆಚ್ಚುವಂತದ್ದು ಎಂದರು.

ನವೋದ್ಯಮಿಗಳಿಗೆ ಕೃಷಿಕಲ್ಪದಿಂದ ನೆರವು

ಕೃಷಿಕಲ್ಪ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ. ಪಾಟೀಲ್ ಮಾತನಾಡಿ, 2017ರಿಂದ ರಾಜ್ಯ ಸರ್ಕಾರವು ಪ್ರತಿ ವರ್ಷ ನವೋದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಗರಿಷ್ಠ 50 ಲಕ್ಷ ರೂ.ವರೆಗೆ ಸಹಾಯಧನ ಒದಗಿಸುತ್ತಿದೆ. ಪ್ರಸ್ತುತ ಆಯ್ಕೆಯಾಗಿರುವ 25 ನವೋದ್ಯಮಿಗಳ ಪೈಕಿ 18 ಮಂದಿ ಕಲ್ಯಾಣ ಕರ್ನಾಟಕ ಭಾಗದವರಾಗಿದ್ದಾರೆ ಎಂದು ತಿಳಿಸಿದರು.

ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳ ತಯಾರಿಕೆ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕೌಶಲ್ಯಗಳ ಕುರಿತು ನವೋದ್ಯಮಿಗಳಿಗೆ ಕೃಷಿಕಲ್ಪ ಸಂಸ್ಥೆ ವಿವಿಧ ರೀತಿಯಲ್ಲಿ ನೆರವು ನೀಡುತ್ತಿದೆ. ಪ್ರತಿ ನವೋದ್ಯಮ ಸಂಸ್ಥೆಯಿಂದ ಕನಿಷ್ಠ ನಾಲ್ವರಿಗೆ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದರು.

ಸಾಂಪ್ರದಾಯಿಕ ಸಿರಿಧಾನ್ಯಗಳಿಗೆ ಆಧುನಿಕ ರೂಪ

ಸಾಂಪ್ರದಾಯಿಕ ಸಿರಿಧಾನ್ಯಗಳ ನೈಸರ್ಗಿಕ ಗುಣಗಳನ್ನು ಉಳಿಸಿಕೊಂಡು ಇಂದಿನ ಗ್ರಾಹಕರಿಗೆ ಸುಲಭವಾಗಿ ಬಳಸಬಹುದಾದ ರೀತಿಯಲ್ಲಿ ಉತ್ಪನ್ನಗಳನ್ನು ಸಿದ್ಧಪಡಿಸುವುದು ಪ್ರೊವಿಫೈ ಸಂಸ್ಥೆಯ ಉದ್ದೇಶವಾಗಿದೆ. ಇದು ಕೇವಲ ಹೊಸ ಉತ್ಪನ್ನಗಳ ಪರಿಚಯವಲ್ಲ; ಆರೋಗ್ಯಕರ ಆಹಾರ ಸಂಸ್ಕೃತಿಗೆ ಉತ್ತೇಜನ ನೀಡುವುದು, ರೈತರಿಗೆ ಹೆಚ್ಚಿನ ಮೌಲ್ಯ ದೊರಕಿಸುವುದು ಹಾಗೂ ಸುಸ್ಥಿರ ಕೃಷಿಗೆ ಪ್ರೋತ್ಸಾಹ ನೀಡುವ ಪ್ರಯತ್ನವಾಗಿದೆ ಎಂದು ಸಂಸ್ಥೆಯ ಯುವ ಉದ್ಯಮಿಗಳು ತಿಳಿಸಿದರು.

ಪ್ರೊವಿಫೈ ಸಿರಿಧಾನ್ಯಗಳನ್ನು ಸುಮಾರು 7ರಿಂದ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಯಾಂತ್ರಿಕವಾಗಿ ಒಣಗಿಸಿ, ಸ್ವಚ್ಛತಾ ಮಾನದಂಡಗಳನ್ನು ಪಾಲಿಸಿ ಪ್ಯಾಕ್ ಮಾಡಲಾಗುತ್ತಿದೆ. ಇದರಿಂದ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕಡಿಮೆ ಸಮಯದಲ್ಲಿ ಅಡುಗೆ ಮಾಡಲು ಗ್ರಾಹಕರಿಗೆ ಅನುಕೂಲವಾಗಲಿದೆ. ಸಮಯ ಉಳಿತಾಯದ ಜೊತೆಗೆ ಸಿರಿಧಾನ್ಯಗಳನ್ನು ಆಹಾರದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಲು ಸಹಾಯವಾಗಲಿದೆ ಎಂದು ಪ್ರಶಾಂತ್ ಎಸ್. ಬೆಳ್ಳೆರಿಮಠ್, ಮಹೇಶ್ ಪಾಟೀಲ್ ಹಾಗೂ ನಾಗರಾಜ ಮರಲಿಂಗಣ್ಣವರ ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿಕಲ್ಪ ಸಂಸ್ಥೆಯ ಉಪಾಧ್ಯಕ್ಷ ಈರಣ್ಣ ರೊಟ್ಟೆ, ಯುವ ಉದ್ಯಮ ಯೋಜನೆ ಮುಖ್ಯಸ್ಥ ಅಭಿನಂದನ್ ಕವಳೆ, ಉದ್ಯಮಿ ದೊಡ್ಡಪ್ಪ ನಿಷ್ಠಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಶಿಖರ್ ಮೋಘಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಸೇರಿದಂತೆ ಕೃಷಿಕಲ್ಪ ಸಂಸ್ಥೆಯ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button