ಮಹಿಳೆಯರು ಕುಟುಂಬದಂತೆ ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಲಿ: ಪವನ್ಕುಮಾರ್ ವಳಕೇರಿ
ಪ್ರಭಾವತಿ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ; 21 ಮಹಿಳೆಯರಿಂದ ಸಸಿ ನೆಡುವ ಮೂಲಕ ಪರಿಸರ ಕಾಳಜಿ

ಕಲಬುರಗಿ, ಆ.16: ಮಹಿಳೆಯರು ಜಾತಿ, ಮತ, ಪಂಥದ ಭೇದ ಮರೆತು ಒಂದು ಕುಟುಂಬದ ಸದಸ್ಯರಂತೆ ಪರಸ್ಪರ ಬಾಂಧವ್ಯ ಬೆಳೆಸಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪವನ್ಕುಮಾರ್ ಬಿ. ವಳಕೇರಿ ಕರೆ ನೀಡಿದರು.
ನಗರದ ಪ್ರಭಾವತಿ ತೇಲ್ಕರ್ ಬಡಾವಣೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಭಾವತಿ ಮಹಿಳಾ ಸ್ವಸಹಾಯ ಸಂಘದ ಉದ್ಘಾಟನೆ ಹಾಗೂ 21 ಸಸಿಗಳ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಡಾವಣೆಯ ಮಹಿಳೆಯರು ಜಾತಿ, ಮತ ಹಾಗೂ ಪಂಥದ ಭೇದಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು. ಮಹಿಳೆಯರು ಸಂಘಟಿತರಾಗಿ ಸ್ವಾವಲಂಬನೆ ಸಾಧಿಸುವುದರೊಂದಿಗೆ ಸಮಾಜದ ಅಭಿವೃದ್ಧಿಗೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಅನಿತಾ ಪವನ್ಕುಮಾರ್ ವಳಕೇರಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರೊ. ರವೀಂದ್ರ ಪಾಟೀಲ ಅವರು ಸ್ವಸಹಾಯ ಸಂಘಗಳ ಸ್ಥಾಪನೆ, ಸಂಘದ ಕಾರ್ಯನಿರ್ವಹಣೆ ಹಾಗೂ ಆರ್ಥಿಕ ನಿರ್ವಹಣೆ ಕುರಿತು ಸುದೀರ್ಘ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಜಿಲ್ಲಾ ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಅವರು ಮಾಹಿತಿ ನೀಡಿದರು.
ಪ್ರಭಾವತಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಅನಿತಾ ಪವನ್ಕುಮಾರ್ ವಳಕೇರಿ, ಉಪಾಧ್ಯಕ್ಷೆಯಾಗಿ ರೋಷನ್ ಬಿ. ಉತ್ತನಾಳ ಹಾಗೂ ಕಾರ್ಯದರ್ಶಿಯಾಗಿ ವಿಠಾಬಾಯಿ ಪಾಟೀಲ ಆಯ್ಕೆಯಾಗಿದ್ದಾರೆ. ಸಂಘದಲ್ಲಿ ಒಟ್ಟು 21 ಮಹಿಳಾ ಸದಸ್ಯರಿದ್ದು, ಮಹಿಳೆಯರ ಸ್ವಾವಲಂಬನೆ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಂಘದ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಸಂಘದ 21 ಮಹಿಳಾ ಸದಸ್ಯರು ತಲಾ ಒಂದೊಂದು ಸಸಿಯಂತೆ ಒಟ್ಟು 21 ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಹಿರಿಯರಾದ ಮಲ್ಲನಗೌಡ ಪಾಟೀಲ ನಂದಿಕೂರ, ಭೋಜರಾಜ್ ಮಠ, ಪವನ್ಕುಮಾರ್ ಬಿ. ವಳಕೇರಿ, ಬಸವಲಿಂಗ ಪಾಟೀಲ, ಹೂವಣ್ಣ ಗೌಡ, ಶಕೀಲ ಉತ್ತನಾಳ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ನಾಗಮ್ಮ ಕಾಳೆ ಸ್ವಾಗತಿಸಿದರು. ಆಶಾ ಮುಚಖೇಡ ವಂದಿಸಿದರು.



