ಕಲಬುರಗಿಯಲ್ಲಿ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ನುಡಿನಮನ
ಕಲಾವಿದರ ಗೆಳೆಯರ ಬಳಗದ ವತಿಯಿಂದ ಶ್ರದ್ಧಾಂಜಲಿ; ಗೀತೆಗಳ ಗಾಯನದ ಮೂಲಕ ಮಹಾನ್ ಗಾಯಕಿಗೆ ಗೌರವ ಸಲ್ಲಿಕೆ

ಕಲಬುರಗಿ: ಶತಮಾನದ ಶ್ರೇಷ್ಠ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ಹಿನ್ನೆಲೆಯಲ್ಲಿ ಕಲಬುರಗಿಯ ಕಲಾವಿದರ ಗೆಳೆಯರ ಬಳಗ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಭಾನುವಾರ ಸಂಜೆ ಆಯೋಜಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಲಾಯಿತು. ಬಳಿಕ ಒಂದು ನಿಮಿಷ ಮೌನಾಚರಣೆ ನಡೆಸಿ, ಅಗಲಿದ ಹಿರಿಯ ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.
ನಂತರ ಎಸ್. ಜಾನಕಿ ಅವರು ಹಾಡಿದ ಅಮರ ಗೀತೆಗಳನ್ನು ಗಾಯನ ಮಾಡುವ ಮೂಲಕ ಕಲಾವಿದರು ತಮ್ಮ ನುಡಿನಮನ ಹಾಗೂ ಸಂಗೀತ ನಮನ ಸಲ್ಲಿಸಿದರು. ಅವರ ಸುಮಧುರ ಕಂಠದ ಮೂಲಕ ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಗಾಯಕರಾದ ದೀಪಕ್ ಠಾಕೂರ್, ಮಹೇಶ್ ಚಿಂತನಪಳ್ಳಿ, ಮಹೇಶ್ ಹಿರೇಮಠ್, ಲಕ್ಷ್ಮೀ ಕುಲಕರ್ಣಿ, ಅನುಶ್ರೀ ಠಾಕೂರ್, ಆನಂದ್ ಹೂಗಾರ್ ಸೇರಿದಂತೆ ಹಲವಾರು ಗಾಯಕರು, ಸಂಗೀತಾಸಕ್ತರು ಹಾಗೂ ಗಣ್ಯರು ಭಾಗವಹಿಸಿ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದರು.



