ಮಳೆಯಾಗಲೆಂದು ಯಾಳವಾರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದಿಂದ ವಿಶೇಷ ನಮಾಜ್ ಪ್ರಾರ್ಥನೆ
ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜನಕಲ್ಯಾಣಕ್ಕಾಗಿ ಸಾಮೂಹಿಕ ದುಆ ಸಲ್ಲಿಸಿದ ಭಕ್ತರು

ಜೇವರ್ಗಿ, ಜು.2: ತಾಲೂಕಿನ ಯಾಳವಾರ ಗ್ರಾಮದಲ್ಲಿ ಉತ್ತಮ ಮಳೆಯಾಗಲಿ, ರೈತರಿಗೆ ಸಮೃದ್ಧ ಬೆಳೆ ದೊರೆಯಲಿ ಹಾಗೂ ಪ್ರಕೃತಿ ಸಮತೋಲನ ಕಾಪಾಡಲ್ಪಡಲಿ ಎಂಬ ಉದ್ದೇಶದಿಂದ ಮುಸ್ಲಿಂ ಸಮುದಾಯದ ವತಿಯಿಂದ ವಿಶೇಷ ನಮಾಜ್ ಹಾಗೂ ಸಾಮೂಹಿಕ ದುಆ (ಪ್ರಾರ್ಥನೆ) ಸಲ್ಲಿಸಲಾಯಿತು.
ಗ್ರಾಮದ ಈದ್ಗಾ ಮೈದಾನ ಮತ್ತು ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಧಾರ್ಮಿಕ ಮುಖಂಡರು ಮುನ್ನಡೆ ವಹಿಸಿದ್ದರು. ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗುವಂತೆ ಉತ್ತಮ ಮಳೆಯಾಗಲಿ, ಜನಜೀವನ ಸುಧಾರಿಸಲಿ ಹಾಗೂ ಸಕಲ ಜೀವಿಗಳಿಗೂ ಒಳಿತಾಗಲಿ ಎಂದು ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುನ್ನಾ ಪಟೇಲ್, ಲಾಳೆ ಪಟೇಲ್, ದಸ್ತಗೀರ್ ಪಟೇಲ್, ಮಹಿಬೂಬ್ ಪಟೇಲ್, ವಜೀರ್ ಪಟೇಲ್, ದಾವಲ್ ಪಟೇಲ್, ಖಾಜಾ ಪಟೇಲ್, ಮಿರಗೌಡ ಅಲ್ಲಾ ಪಟೇಲ್, ಬಡ್ಡಾ ಪಟೇಲ್, ಟೇಲರ್ ಶಬ್ಬೀರ್, ಇಬ್ರಾಹಿಂ ಅಬುಲ್ ಪಟೇಲ್, ಮಹಿಬೂಬ್ ಸಾಬ್ ಮುಲ್ಲಾ, ತಾಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಭಾಷಾ ಪಟೇಲ್ ಸೇರಿದಂತೆ ಗ್ರಾಮದ ಮುಖಂಡರು, ಹಿರಿಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.



