ಅಫಜಲಪುರ ಠಾಣೆಯಲ್ಲಿ ಪೋಲಿಸರ ಕುಂಭಕರ್ಣ ನಿದ್ರೆ: ಪೋಕ್ಸೋ ಆರೋಪಿ ಪರಾರಿ..!

ಅಫಜಲಪುರ, ಜು.೩- ವಿಚಾರಣೆಗೆಂದು ಕರೆತರಲಾಗಿದ್ದ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ನಸುಕಿನ ವೇಳೆ ಪೊಲೀಸರ ಕಣ್ಣು ತಪ್ಪಿಸಿ, ಪರಾರಿಯಾದ ಘಟನೆ ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಇದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಾಗಿದ್ದು, ಉಸ್ತುವಾರಿ ಸಚಿವರು ಆಗಿದ್ದಾರೆ. ಅವರ ಜಿಲ್ಲೆಯಲ್ಲಿ ನಡೆದ ಈ ಘಟನೆ ಇದೀಗ ಪೊಲೀಸ್ ಇಲಾಖೆಗೆ ಸಾಕಷ್ಟು ಮುಜುಗರವನ್ನುಂಟು ಮಾಡಿದೆ
೨೪ ವರ್ಷದ ಆರೋಪಿ ತನ್ನ ಕೈಗೆ ಹಾಕಿದ್ದ ಕೈಕೊಳವನ್ನು ಬಿಚ್ಚಿ ಠಾಣೆಯ ಆವರಣದಲ್ಲಿದ್ದ ಮರದ ಕೊಂಬೆ ಹತ್ತಿ ಕೌಂಪೌoಡ್ ಹಾರಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯನ್ನು ಸೆರೆಯಾಗಿದೆ. ಸದ್ಯ ಆರೋಪಿಯ ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯವನ್ನು ಬಿಗಿಗೊಳಿಸಲಾಗಿದೆ.
ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ೧೬ ವರ್ಷದ ಬಾಲಕಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಅದೇ ಗ್ರಾಮದಲ್ಲಿ ೨೪ ವರ್ಷದ ಯುವಕನೊಬ್ಬ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಅಪಹರಿಸಿಕೊಂಡು ಹೋಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಬೆನ್ನತ್ತಿದ ಪೊಲೀಸರು, ಇಬ್ಬರೂ ಮಹಾರಾಷ್ಟ್ರದ ಪುಣೆಯಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಾಲಕಿಯ ಪೋಷಕರೊಂದಿಗೆ ತೆರಳಿದ್ದರು.
ಪುಣೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ತಡರಾತ್ರಿ ಅಫಜಲಪುರಕ್ಕೆ ಬಂದಿದ್ದರು. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಲಬುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತು ಯುವಕನನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಜೈಲಿನಲ್ಲಿದ್ದ ಆರೋಪಿ ಬೆಳಗಿನ ಜಾವ ಠಾಣೆಯಲ್ಲಿದ್ದ ಪೊಲೀಸರು ನಿದ್ದೆ ಮಾಡುತ್ತಿರುವ ಸಂದರ್ಭದಲ್ಲಿ ಚಾಣಾಕ್ಷತನದಿಂದ ತನ್ನ ಕೋಳವನ್ನು ಬಿಚ್ಚಿ, ಠಾಣೆಯ ಎರಡನೇ ಮಹಡಿಗೆ ತೆರಳಿ, ಅಲ್ಲಿಗೆ ಹೊಂದಿಕೊoಡಿದ್ದ ಬೇವಿನ ಮರದ ಕೊಂಬೆಯನ್ನು ಹಿಡಿದು ಜಿಗಿದು ಕತ್ತಲಲ್ಲಿ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಪೊಲೀಸರು ಗಾಬರಿಗೊಂಡಿದ್ದು, ಆತ ಬಳಸಿದ ಚಾಣಾಕ್ಷತನಕ್ಕೆ ಹೌಹಾರಿದ್ದಾರೆ.
ಪ್ರಾಥಮಿಕ ವಿಚಾರಣೆ ನಡೆಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಅದಕ್ಕೂ ಮುನ್ನವೇ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ. ಕರ್ತವ್ಯ ನಿರತ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಈ ಲೋಪ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರೂ ಆದ ಕಲಬುರಗಿಯಲ್ಲೇ ಇಂತಹ ಘಟನೆ ನಡೆದಿರುವುದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸಿಪಿಐ ಲಖನ್ ಮಸಗುಪ್ಪಿ ಮತ್ತು ಪಿಎಸ್ಐ ಸೋಮಲಿಂಗಪ್ಪ ಒಡೆಯರ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಿ, ಆರೋಪಿಯ ಪತ್ತೆಗೆ ಕ್ರಮಗೊಂಡಿದ್ದಾರೆ.
ಇನ್ನೊoದೆಡೆ ಕರ್ತವ್ಯಲೋಪ ವೆಸಗಿರುವ ಠಾಣೆಯ ಪೊಲೀಸರ ಮೇಲೆ ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ತಿಳಿಸಿದ್ದಾರೆ. ಠಾಣೆಯಿಂದಲೇ ಆರೋಪಿಯೊಬ್ಬ ಪರಾರಿಯಾಗಿರುವ ಈ ಘಟನೆ ಇಡೀ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಪೊಲೀಸ್ ಠಾಣೆಯಲ್ಲಿಯಿಂದಲೇ ಆರೋಪಿ ಪರಾರಿಯಾದ ಘಟನೆ ಇದೀಗ ಕಲಬುರಗಿ ನಗರದಲ್ಲಿ ಸಾಕಷ್ಟು ಚರ್ಚೆಯ ವಿಷಯವಾಗಿದ್ದು, ಹೇಗೆ ತಪ್ಪಿಸಿಕೊಂಡ, ತಪ್ಪಿಸಿಕೊಳ್ಳುತ್ತಿದ್ದಾಗ ಪೊಲೀಸರು ಏನು ಮಾಡುತ್ತಿದ್ದರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿರುವುದು ಸಾಮಾನ್ಯವಾಗಿತ್ತು



