‘ಆವಾರಾಪನ್ ೨’ ಮುನ್ನೋಟ ಬಿಡುಗಡೆ: ೧೯ ವರ್ಷಗಳ ಬಳಿಕ ಶಿವಂ ಪಂಡಿತ್ ಆಗಿ ಮರಳಿದ ಇಮ್ರಾನ್ ಹಾಶ್ಮಿ

‘ಆವಾರಾಪನ್’ ಚಿತ್ರ ಬಿಡುಗಡೆಯಾಗಿ ೧೯ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿರ್ಮಾಪಕ ವಿಶೇಷ್ ಭಟ್ ‘ಆವಾರಾಪನ್ ೨’ ಚಿತ್ರದ ಮುನ್ನೋಟವನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಮೂಲಕ ನಟ ಇಮ್ರಾನ್ ಹಾಶ್ಮಿ ಅವರು ‘ಶಿವಂ ಪಂಡಿತ್’ ಪಾತ್ರದಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.
೨೦೦೭ರಲ್ಲಿ ಬಿಡುಗಡೆಯಾದ ‘ಆವಾರಾಪನ್’ ತನ್ನ ಭಾವನಾತ್ಮಕ ಕಥಾಹಂದರ ಮತ್ತು ಮನಮುಟ್ಟುವ ಹಾಡುಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ಬರುತ್ತಿರುವ ‘ಆವಾರಾಪನ್ ೨’ ಕೂಡ ಭಾವನೆ, ಆ್ಯಕ್ಷನ್ ಮತ್ತು ಸಂಗೀತಕ್ಕೆ ಹೆಚ್ಚಿನ ಮಹತ್ವ ನೀಡುವ ಕಥೆಯೊಂದಿಗೆ ಮೂಡಿಬರುತ್ತಿದೆ.
ಬಿಡುಗಡೆಯಾದ ಮುನ್ನೋಟದಲ್ಲಿ ದುಃಖ ಮತ್ತು ನಷ್ಟದ ನೋವಿನೊಂದಿಗೆ ಬದುಕುತ್ತಿರುವ ಶಿವಂ ಪಂಡಿತ್ ಪಾತ್ರವನ್ನು ಕಾಣಬಹುದು. ಇಮ್ರಾನ್ ಹಾಶ್ಮಿ ಅವರ ಧ್ವನಿಯಲ್ಲೇ ಕಥೆಯ ನಿರೂಪಣೆ ಸಾಗುತ್ತದೆ. ಮುನ್ನೋಟದ ಕೊನೆಯಲ್ಲಿ “ಈ ಬಾರಿ ಈ ಅಲೆಮಾರಿತನ ಕೊನೆಗೊಳ್ಳುತ್ತದೆ, ಇಲ್ಲವೇ ನಾನು” ಎಂಬ ಸಂಭಾಷಣೆ ಚಿತ್ರದ ಭಾವನಾತ್ಮಕ ಸಂಘರ್ಷ ಮತ್ತು ಮುಂದಿನ ಕಥೆಯ ಕುರಿತ ಕುತೂಹಲವನ್ನು ಹೆಚ್ಚಿಸಿದೆ.
ಮುನ್ನೋಟದಲ್ಲಿ ಜನಪ್ರಿಯ ಹಾಡಾದ ‘ತೋ ಫಿರ್ ಆವೋ’ ಹಾಡಿನ ಹೊಸ ರೂಪವೂ ಕೇಳಿಬರುತ್ತದೆ. ಸಂಗೀತ ನಿರ್ದೇಶಕ ಮಿಥೂನ್ ಅವರ ಸಂಗೀತ ಮತ್ತು ಸಯೀದ್ ಕಾದ್ರಿ ಅವರ ಸಾಹಿತ್ಯದಲ್ಲಿ ಈ ಹೊಸ ಆವೃತ್ತಿ ಮೂಡಿಬಂದಿದ್ದು, ಮೂಲ ಹಾಡಿನ ಆತ್ಮವನ್ನು ಉಳಿಸಿಕೊಂಡೇ ಹೊಸ ಕಥೆಗೆ ಹೊಂದುವಂತೆ ರೂಪಿಸಲಾಗಿದೆ.
ಚಿತ್ರದಲ್ಲಿ ಇಮ್ರಾನ್ ಹಾಶ್ಮಿ ಅವರೊಂದಿಗೆ ದಿಶಾ ಪಟಾಣಿ ಮತ್ತು ಶಬಾನಾ ಆಜ್ಮಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸುರೇಂದ್ರ ವಿಕ್ಕಿ, ವಿಜಯಂತ್ ಕೊಹ್ಲಿ ಮತ್ತು ಅತುಲ್ ಕುಮಾರ್ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಆವಾರಾಪನ್ ೨’ ಚಿತ್ರವನ್ನು ವಿಶೇಷ್ ಭಟ್ ನಿರ್ಮಿಸಿದ್ದು, ನಿತಿನ್ ಕಕ್ಕರ್ ನಿರ್ದೇಶನ ಮಾಡಿದ್ದಾರೆ. ಕಥೆ ಮತ್ತು ಚಿತ್ರಕಥೆಯನ್ನು ಬಿಲಾಲ್ ಸಿದ್ದೀಕಿ ರಚಿಸಿದ್ದಾರೆ. ಈ ಚಿತ್ರವು ೨೦೨೬ರ ಆಗಸ್ಟ್ ೧೪ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.



