‘ನಡೆದು ನೋಡು ಕರ್ನಾಟಕ’ ವಿಶೇಷ ಕಾರ್ಯಕ್ರಮ: ಕಲಬುರಗಿಯಲ್ಲಿ ಐತಿಹಾಸಿಕ ಸ್ಮಾರಕಗಳ ಛಾಯಾಚಿತ್ರ ಪ್ರದರ್ಶನ
ಮೂರು ದಿನಗಳ ವಿಶೇಷ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣಗಳ ವೈಭವ ಅನಾವರಣ.

ಕಲಬುರಗಿ, ಜು.27: ಕರ್ನಾಟಕವನ್ನು ಪ್ರವಾಸಿ ದೃಷ್ಟಿಕೋನದಿಂದ ಪರಿಚಯಿಸುವ ಉದ್ದೇಶದ ‘ಸಮಾಜಮುಖಿ ನಡಿಗೆ’ ಸಂಘಟನೆಯ ‘ನಡೆದು ನೋಡು ಕರ್ನಾಟಕ’ ವಿಶೇಷ ಮೂರು ದಿನಗಳ ಕಾರ್ಯಕ್ರಮದ ಅಂಗವಾಗಿ ಕಲಬುರಗಿಯ ಖ್ಯಾತ ಛಾಯಾಗ್ರಾಹಕ ನಾರಾಯಣ ಜೋಶಿ ಅವರ ಐತಿಹಾಸಿಕ ಸ್ಮಾರಕಗಳ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಯಿತು.
ನಗರದ ನಾಗನಹಳ್ಳಿ ಸಮೀಪದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಪ್ರದರ್ಶನದಲ್ಲಿ ಕಲ್ಯಾಣ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಾದ ಬಹಮನಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇನವಾಜ್ ದರ್ಗಾ, ಹಫ್ತ್ ಗುಂಬಜ್, ವಸ್ತುಸಂಗ್ರಹಾಲಯ ಹಾಗೂ ಬೌದ್ಧ ವಿಹಾರ ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳ ಆಕರ್ಷಕ ಛಾಯಾಚಿತ್ರಗಳು ಪ್ರದರ್ಶನಗೊಂಡವು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಮಾಜಮುಖಿ ನಡಿಗೆ ಸದಸ್ಯರಿಗೆ ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಕ ಬಿ.ಎಂ. ರಾವೂರ್ ಅವರು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವದ ಕುರಿತು ವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 35ಕ್ಕೂ ಹೆಚ್ಚು ಸಂಶೋಧಕರು, ಚಿಂತಕರು ಹಾಗೂ ಪ್ರವಾಸಾಸಕ್ತರು ಭಾಗವಹಿಸಿದ್ದರು.
ಮೂರು ದಿನಗಳ ಕಾರ್ಯಕ್ರಮದ ಭಾಗವಾಗಿ ಕಲಬುರಗಿ ಹಾಗೂ ಸುತ್ತಮುತ್ತಲಿನ ಐತಿಹಾಸಿಕ, ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಲಾಯಿತು. ಬೌದ್ಧ ಸ್ಮಾರಕ ಸನ್ನತಿ, ಕನಗಾನಹಳ್ಳಿ, ಚಂದ್ರಲಾಂಬ ದೇವಸ್ಥಾನ ಹಾಗೂ ಕಾಳಗಿಯ ಐತಿಹಾಸಿಕ ಸ್ಥಳಗಳಿಗೂ ಪ್ರವಾಸ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಡಾ. ದೇವೇಂದ್ರಪ್ಪ ಜಾಜಿ, ಸಂಶೋಧಕರು, ಸಾಹಿತಿಗಳು, ಡಾ. ಪುಷ್ಪಲತಾ ಬಳ್ಳಾರಿ, ಶುಭಾ ಅರಸ್ (ಬೆಂಗಳೂರು), ಗಿರಿಜಾ ಚಂದ್ರಶೇಖರ (ಬೆಳಗೆರೆ), ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಡಾ. ದೇವೇಂದ್ರಪ್ಪ ಜಾಜಿ ಮಾತನಾಡಿ, ಕಲ್ಯಾಣ ಕರ್ನಾಟಕದ ಐತಿಹಾಸಿಕ ಪರಂಪರೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ರಾಜ್ಯದ ವಿವಿಧ ಭಾಗಗಳ ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸೂಫಿ ಸಂಪ್ರದಾಯದ ಖವ್ವಾಲಿ ಕಾರ್ಯಕ್ರಮವೂ ಆಯೋಜಿಸಲಾಗಿದ್ದು, ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು. ರಮೇಶ್ ಗೊಬ್ಬೂರು ಅವರು ಕಲಬುರಗಿಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಿದರು.



