ಡಾ. ಎಸ್.ಎಸ್. ಪಾಟೀಲರ ಪುಣ್ಯಸ್ಮರಣೆ: ಕಲಬುರಗಿಯಲ್ಲಿ ಇಂದು ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ
ಆ.23ರಂದು ಎಸ್ಎಂಆರ್ಎಂಸಿ ಸ್ಯಾಕ್ ಹಾಲ್ನಲ್ಲಿ ಪ್ರಶಸ್ತಿ ಪ್ರದಾನ: ಡಾ. ಮ.ನು. ಬಳಿಗಾರ

ಕಲಬುರಗಿ, ಆ.22: ಖ್ಯಾತ ಉದ್ಯಮಿ ದಿವಂಗತ ಡಾ. ಎಸ್.ಎಸ್. ಪಾಟೀಲ ಅವರ ನಾಲ್ಕನೇ ಪುಣ್ಯಸ್ಮರಣೆ ಅಂಗವಾಗಿ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.23ರಂದು ಸಂಜೆ 5 ಗಂಟೆಗೆ ನಗರದ ಸೇಡಂ ರಸ್ತೆಯಲ್ಲಿರುವ ಆರ್ಟಿಓ ಕಚೇರಿ ಎದುರಿನ ಎಸ್ಎಂಆರ್ಎಂಸಿ ಸ್ಯಾಕ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಮ.ನು. ಬಳಿಗಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನವನ್ನು ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಯಧರ್ಮಸಿಂಗ್ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಫೌಂಡೇಶನ್ ಗೌರವಾಧ್ಯಕ್ಷೆ ಶ್ರೀಮತಿ ಸರೋಜಿನಿದೇವಿ ಎಸ್. ಪಾಟೀಲ ಅವರು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ವಹಿಸಲಿದ್ದು, ಪಾಟೀಲ ಗ್ರೂಪ್ ಆಫ್ ಇಂಡಸ್ಟ್ರೀಸ್ ಅಧ್ಯಕ್ಷ ಲಿಂಗರಾಜ್ ಎಸ್. ಪಾಟೀಲ, ಉದ್ಯಮಿ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಬಸಂತಕುಮಾರ್ ಪಾಟೀಲ, ಉದ್ಯಮಿ ರೇವಣಸಿದ್ದಪ್ಪ ಜಿ. ಪಾಟೀಲ ಹಾಗೂ ಸಿದ್ದಲಿಂಗ ಎಸ್. ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿರುವರು ಎಂದರು.
ಈ ಬಾರಿಯ ಕರ್ಮಯೋಗಿ ಪ್ರಶಸ್ತಿಯನ್ನು ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು, ಬಸವ ಸಮಿತಿಯ ಜಿಲ್ಲಾಧ್ಯಕ್ಷೆ ಡಾ. ಶ್ರೀಮತಿ ವಿಲಾಸವತಿ ಖೂಬಾ, ಲೇಖಕ ಎ.ಕೆ. ರಾಮೇಶ್ವರ, ಕಲಾವಿದ ಪಂಡಿತ್ ಫಕೀರೇಶ ಕನವಿ, ಖ್ಯಾತ ಕ್ಯಾನ್ಸರ್ ತಜ್ಞ ಡಾ. ಶೇಖರ್ ಪಾಟೀಲ, ಉದ್ಯಮಿ ಡಾ. ಸಂಜೀವ್ ಗುಪ್ತಾ, ವಾಣಿಜ್ಯೋದ್ಯಮಿ ರಾಹುಲ್ಕುಮಾರ್ ಎನ್. ಬಲ್ನೋಟಾ ಹಾಗೂ ಉದ್ಯಮಿ ಪ್ರೀತಮ್ ಮೆಹತಾ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಮುಂಬೈನ ಶ್ರೀಮತಿ ಮಧುಶ್ರೀ ಭಟ್ಟಾಚಾರ್ಯ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಡಾ. ಮ.ನು. ಬಳಿಗಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಜಿತ್ ಚಿಂದೆ, ಕೌಸ್ತುಭ್ ಸೌರಭ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



