ನಿರಂತರ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ: ಶರಣಪ್ಪ ಮಲಗೊಂಡ
ಉಚಿತ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ; ಅರ್ಹ ಅಭ್ಯರ್ಥಿಗಳಿಗೆ ಸನ್ಮಾನ

ಬೀದರ್, ಜು.20: ಅಧ್ಯಯನ ಮತ್ತು ನಿರಂತರ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶರಣಪ್ಪ ಮಲಗೊಂಡ ಹೇಳಿದರು.
ಸ್ಪರ್ಧಾ ಗುರು ಐಎಎಸ್ ಮತ್ತು ಕೆಎಎಸ್ ಅಧ್ಯಯನ ಕೇಂದ್ರದ ವತಿಯಿಂದ ನಗರದ ಮೈಲೂರು ಕ್ರಾಸ್ ಸಮೀಪದ ರೇಣುಕಾ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಪಿಎಸ್ಟಿಆರ್, ಜಿಪಿಎಸ್ಟಿಆರ್, ಎಚ್ಎಸ್ಟಿಆರ್, ಕೃಷಿ ಶಿಕ್ಷಕ, ಪೊಲೀಸ್ ಕಾನ್ಸ್ಟೆಬಲ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ಭೂ ಮಾಪಕ ನೇಮಕಾತಿ ಪರೀಕ್ಷೆಗಳ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅಭ್ಯರ್ಥಿಗಳು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಯನ ಕೇಂದ್ರದ ನಿರ್ದೇಶಕ ಅಮಿತ್ ಸೋಲಾಪುರ ಮಾತನಾಡಿ, ಕೇಂದ್ರದಲ್ಲಿ ಗುಣಮಟ್ಟದ ತರಬೇತಿ ನೀಡುತ್ತಿರುವುದರಿಂದ ಪ್ರತಿವರ್ಷ ಅನೇಕ ಅಭ್ಯರ್ಥಿಗಳು ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ. ವಿದ್ಯಾ ಪಾಟೀಲ ಹಾಗೂ ಡಯಟ್ ಉಪನ್ಯಾಸಕ ಸಂತೋಷ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ದೇವಿಪ್ರಸಾದ್ ಕಲಾಲ್, ಎಸ್.ಎಂ. ಜೋಶಿ, ಆಶಾ, ಶ್ರುತಿ, ಶಿಕ್ಷಕ ವಿಜಯಾನಂದ ಭೋಸಲೆ, ಸಾಗರ್ ಮೇತ್ರೆ, ಶರಣು ನಂದಗಾಂವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಾಗನಾಥ ಬಿರಾದಾರ್ ಕಾರ್ಯಕ್ರಮ ನಿರೂಪಿಸಿದರು.



