ತಳವಾರ್ ಸಮಾಜಕ್ಕೆ ಎಸ್ಟಿ ಪ್ರಮಾಣಪತ್ರ ನೀಡಿ: ನೂತನ ಮುಖ್ಯಮಂತ್ರಿಗಳಿಗೆ ತಳವಾರ್ ಮೊರೆ

ಕಲಬುರ್ಗಿ, ಜು.೫- ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರಕ್ಕೆ ಆಗಮಿಸುತ್ತಿರುವುದು ಸ್ವಾಗತಾರ್ಹ. ಈ ಸಂದರ್ಭದಲ್ಲಿ ತಳವಾರ್ ಸಮಾಜದವರಿಗೆ ಎಸ್ಟಿ ಪ್ರಮಾಣಪತ್ರ ಕೊಡುವಂತಹ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಂಘದ ಸಂತೋಷ್ ತಳವಾರ್ ಅವರು ಒತ್ತಾಯಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ತಳವಾರ ಸಮಾಜಕ್ಕೆ ಎ¸ಟಿ ಪ್ರಮಾಣ ಪತ್ರ ನೀಡುತ್ತಿಲ್ಲ. ತಾವು ಉಪಮುಖ್ಯಮಂತ್ರಿ ಯಾಗಿದ್ದಾಲೂ ಕೂಡ ತಮ್ಮನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ಆದರೂ ಯಾವ ನಿಟ್ಟಿನಲ್ಲಿಯೂ ಕೂಡ ತಳವಾರ್ ಸಮುದಾಯದ ಕಿತ್ತು ತಿನ್ನುತ್ತಿರುವ ಬಡತನ ಅನಕ್ಷರತೆ ಗುಲಾಮಗಿರಿಯ ಜೀತದಾಳ ಪದ್ಧತಿ ಇನ್ನೂ ಹಾಗೆ ಉಳಿದಿವೆ. ತಮ್ಮ ಸ್ಥಾನ ಬದಲಾವಣೆಯಾಯಿತು. ಆದರೆ ಜಿಲ್ಲೆಯಲ್ಲಿರುವ ತಳವಾರ ಸಮುದಾಯಕ್ಕೆ ಯಾವುದೇ ಬದಲಾವಣೆ ಇಲ್ಲದ ಹಾಗೆ ನಡೆಯುತ್ತಿದೆ ಎಂದು ಅವರು ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಪ್ರಗತಿ ಪರಿಶೀಲನೆ ಸಭೆ ಹಮ್ಮಿಕೊಂಡಿದ್ದು, ಆ ಸಭೆಯಲ್ಲಿ ನಮ್ಮ ತಳವಾರ ಸಮಾಜದ ಜ್ವಲಂತ ಸಮಸ್ಯೆಯ ಬಗ್ಗೆನೂ ಕೂಡ ಗಮನದಲ್ಲಿಟ್ಟುಕೊಂಡು ಪ್ರಗತಿಪರ ಚಿಂತನೆಗಳನ್ನು ಮುಂದುವರಿಸಿ ಕರ್ನಾಟಕ ರಾಜ್ಯದಲ್ಲಿ ಎಲ್ಲ ಕಡೆ ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣಪತ್ರ ಸರಳವಾಗಿ ನೀಡುತ್ತಿದ್ದಾರೆ, ಆದರೆ ಜಿಲ್ಲೆಯಲ್ಲಿ ಮಾತ್ರ ನೀಡುತ್ತಿಲ್ಲ ಏಕೆ? ಈ ಒಂದು ವಿಷಯವನ್ನು ಚರ್ಚಿಸಿ ತಳವಾರ್ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರವನ್ನು ಸರಳವಾಗಿ ವಿತರಣೆ ಮಾಡಬೇಕೆಂದು ಆದೇಶ ಹೊರಡಿಸಿದರೂ ಕೂಡ ಜಿಲ್ಲೆಯ ತಳವಾರ ಸಮಾಜದ ಮುಗ್ಧ ಹಾಗೂ ಅವಿದ್ಯಾವಂತ ಬಂಧುಗಳಿಗೆ ಏಕೆ ನೀಡುತ್ತಿಲ್ಲ ಎಂಬುವ ಕುರಿತು ಅಧಿಕಾರಿಗಳಿಂದ ಸ್ಪಷ್ಟವಾಗಿ ದೃಢಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಂದು ವೇಳೆ ಸರಳವಾಗಿ ಎಸ್ಟಿ ಪ್ರಮಾಣಪತ್ರ ದೊರೆಯದೇ ಇದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.



