ಕೊಳತ್ತೂರು ಕ್ಷೇತ್ರದ ಟಿವಿಕೆ ಅಭ್ಯರ್ಥಿ ಗೆಲುವು ಅಸಿಂಧು: ಮದ್ರಾಸ್ ಹೈಕೋರ್ಟ್ನಲ್ಲಿ ಸ್ಟಾಲಿನ್ ಅರ್ಜಿ
286 ಇವಿಎಂಗಳ ಪರಿಶೀಲನೆ ಹಾಗೂ ಶೇ.100ರಷ್ಟು ವಿವಿಪ್ಯಾಟ್ ಸ್ಲಿಪ್ಗಳ ಎಣಿಕೆಗೆ ಆಗ್ರಹ

ಚೆನ್ನೈ, ಆ.24– ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ವಿಧಾನಸಭಾ ಕ್ಷೇತ್ರದಿಂದ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ಅವರ ಗೆಲುವನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ, ತಮ್ಮನ್ನೇ ಆ ಕ್ಷೇತ್ರದಿಂದ ಕಾನೂನುಬದ್ಧವಾಗಿ ಆಯ್ಕೆಯಾದ ಅಭ್ಯರ್ಥಿ ಎಂದು ಘೋಷಿಸುವಂತೆಯೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕೊಳತ್ತೂರು ಕ್ಷೇತ್ರಕ್ಕೆ ಸಂಬಂಧಿಸಿದ 14 ಆಯ್ದ ಇವಿಎಂ ಸೆಟ್ಗಳ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿವಿಪ್ಯಾಟ್ಗಳಲ್ಲಿನ ಮೆಮೊರಿ ಮತ್ತು ಮೈಕ್ರೋಕಂಟ್ರೋಲರ್ಗಳ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ ಹಿರಿಯ ವಕೀಲ ಎನ್.ಆರ್. ಎಳಂಗೋ ಅವರನ್ನು ತಮ್ಮ ಅಧಿಕೃತ ಪ್ರತಿನಿಧಿಯಾಗಿ ಸ್ಟಾಲಿನ್ ನೇಮಿಸಿದ್ದರು.
ಎಳಂಗೋ ಅವರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಗಂಭೀರ ಹಾಗೂ ಆತಂಕಕಾರಿ ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ಸ್ಟಾಲಿನ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ತಕ್ಷಣವೇ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದು ಲೋಪಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ, ಈ ಆಕ್ಷೇಪಣೆಗಳಿಗೆ ಸೂಕ್ತ ಉತ್ತರ ನೀಡದೆ, ಆಗಸ್ಟ್ 5ರಂದು ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ನಿಯಮಾನುಸಾರ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಘೋಷಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಆಗಸ್ಟ್ 6ರಂದು ಮತ್ತೆ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದ ಎಳಂಗೋ ಅವರು ಪರಿಶೀಲನೆ ವೇಳೆ ಕಂಡುಬಂದ ನಿರ್ದಿಷ್ಟ ಲೋಪಗಳನ್ನು ವಿವರಿಸಿದ್ದರು. ಇಂಜಿನಿಯರ್ ನೀಡಿರುವ ಪ್ರಮಾಣಪತ್ರಗಳು ತಾಂತ್ರಿಕ ದೋಷಗಳು ಅಥವಾ ವೈಫಲ್ಯಗಳ ಕಾರಣಗಳನ್ನು ವಿವರಿಸುವ ತಾಂತ್ರಿಕ ವರದಿಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಜಿಲ್ಲಾ ಚುನಾವಣಾಧಿಕಾರಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂಬ ಹೇಳಿಕೆಯನ್ನು ತಾವು ಒಪ್ಪುವುದಿಲ್ಲ ಎಂದು ಸ್ಟಾಲಿನ್ ತಿಳಿಸಿದ್ದಾರೆ. ತಮ್ಮ ಅಧಿಕೃತ ಪ್ರತಿನಿಧಿ ಮೂಲಕ ಸಲ್ಲಿಸಲಾದ ಆಕ್ಷೇಪಣೆಗಳು ಮತ್ತು ಸ್ಪಷ್ಟೀಕರಣಗಳ ಬೇಡಿಕೆಗಳಿಗೆ ಯಾವುದೇ ಸಮರ್ಪಕ ಉತ್ತರ ನೀಡದೆ ಯಾಂತ್ರಿಕವಾಗಿ ಆದೇಶ ಹೊರಡಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇದರ ಜೊತೆಗೆ, ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಳಕೆಯಾದ ಎಲ್ಲಾ 286 ಇವಿಎಂಗಳ ಪರಿಶೀಲನೆ ಹಾಗೂ ವಿವಿಪ್ಯಾಟ್ ಸ್ಲಿಪ್ಗಳ ಶೇ.100ರಷ್ಟು ಎಣಿಕೆ ನಡೆಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಸ್ಟಾಲಿನ್ ನ್ಯಾಯಾಲಯವನ್ನು ಕೋರಿದ್ದಾರೆ.



