ಹೋರಾಟಗಳ ಮೂಲಕ ಆಮ್ ಆದ್ಮಿ ಪಕ್ಷ ಬಲಪಡಿಸುತ್ತೇವೆ: ಜಗದೀಶ್ ಸಾಗರ್
ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ; ಜನಸಮಸ್ಯೆಗಳ ಪರ ನಿರಂತರ ಹೋರಾಟದ ಭರವಸೆ

ಕಲಬುರಗಿ, ಆ. 3: ಜನಪರ ಹೋರಾಟಗಳ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಸಂಘಟಿಸಲಾಗುವುದು ಎಂದು ಪಕ್ಷದ ನೂತನ ಜಿಲ್ಲಾಧ್ಯಕ್ಷ ಜಗದೀಶ್ ಎಸ್. ಸಾಗರ್ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ತಮ್ಮನ್ನು ಕಲಬುರಗಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು.
ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ನಿರಂತರ ಹೋರಾಟ ನಡೆಸಿ ಅವರಿಗೆ ನ್ಯಾಯ ದೊರಕಿಸಲು ಪಕ್ಷ ಬದ್ಧವಾಗಿದೆ ಎಂದು ಹೇಳಿದರು. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ವಿವಿಧ ಹುದ್ದೆಗಳಿಗೆ ನೇಮಕಗೊಂಡ ಪದಾಧಿಕಾರಿಗಳ ಹೆಸರನ್ನೂ ಅವರು ಪ್ರಕಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ದೊಡ್ಡಪ್ಪಗೌಡ ತಂದೆ ಗುಂಡಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಪರಮೇಶ್ವರ ಎಸ್. ಮತ್ತಿಮೂಡ್, ಚಿತ್ತಾಪುರ ತಾಲ್ಲೂಕು ಅಧ್ಯಕ್ಷರಾಗಿ ನಾಗರಾಜ ತಂದೆ ಬಸಣ್ಣ ಹಡಪದ, ಶಹಾಬಾದ್ ತಾಲ್ಲೂಕು ಅಧ್ಯಕ್ಷರಾಗಿ ಶಿವಯೋಗಿ ಪೂಜಾರಿ, ಸೇಡಂ ತಾಲ್ಲೂಕಿನ ಅಧ್ಯಕ್ಷರಾಗಿ ಶರಣಪ್ಪ ತಂದೆ ದೇವೀಂದ್ರಪ್ಪ ಕಟ್ಟಾ ಹಾಗೂ ಚಿಂಚೋಳಿ ಎಸ್ಸಿ/ಎಸ್ಟಿ ವಿಭಾಗದ ಅಧ್ಯಕ್ಷರಾಗಿ ಶ್ರೀಕಾಂತ್ ಖಾನಾಪುರ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಿತ ಸಹಾನಿ, ಸೀತಾರಾಮ ಗುಂಡಪ್ಪ, ಉಷಾ ಮೋಹನ್, ಅರ್ಜುನ್ ಹಲಗಿಗೌಡ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



