ದಾದಾ ಮಹಾರಾಜರಿಗೆ ಶಿಷ್ಯರಿಂದ ಗುರುಪೂರ್ಣಿಮೆ ಸನ್ಮಾನ
ಗುರು ಸ್ಮರಣೆ ಜೀವನಕ್ಕೆ ಸಾರ್ಥಕತೆ ತರುತ್ತದೆ: ದಾದಾ ಮಹಾರಾಜ್ ನಗರಕರ

ಬೀದರ್, ಜು.29: ಗುರು ಎಂದರೆ ಭವಬಂಧನವನ್ನು ಕಳಚಿ ಪರಮಸುಖದತ್ತ ಕೊಂಡೊಯ್ಯುವ ದೈವಸ್ವರೂಪಿ. ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಮೂಡಿಸುವ ಶಕ್ತಿ ಗುರುವಿನಲ್ಲಿದೆ ಎಂದು ದಾದಾ ಮಹಾರಾಜ್ ನಗರಕರ ಹೇಳಿದರು.
ನಗರದ ಶಿವನಗರ ದಕ್ಷಿಣ ಭವಾನಿ ಕಾಲೋನಿಯ ಆಶ್ರಮದಲ್ಲಿ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶಿಷ್ಯರಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಜೀವನಶೈಲಿ, ಜಾಗತೀಕರಣ ಹಾಗೂ ಉದ್ಯೋಗದ ಒತ್ತಡದಿಂದ ಗುರು-ಶಿಷ್ಯರ ನಡುವಿನ ಆತ್ಮೀಯತೆ ಕಡಿಮೆಯಾಗುತ್ತಿದೆ. ಆದರೂ ಗುರುವಿಗೆ ವಂದನೆ ಸಲ್ಲಿಸುವ ಸಂಪ್ರದಾಯ ಇನ್ನೂ ಜೀವಂತವಾಗಿರುವುದು ಸಂತಸದ ಸಂಗತಿ ಎಂದರು.
ಗುರು ಎಂದರೆ ಕೇವಲ ವಿದ್ಯೆ ಕಲಿಸುವವರಲ್ಲ. ಧರ್ಮಮಾರ್ಗ ತೋರಿಸಿ, ಸಂಸ್ಕಾರ ಬೆಳೆಸಿ, ಉತ್ತಮ ಬದುಕಿನ ದಾರಿಯನ್ನು ತೋರಿಸುವವರೂ ಗುರುಗಳೇ. ಇಂತಹ ಗುರುವಿನ ಸ್ಮರಣೆಯನ್ನು ಪ್ರತಿನಿತ್ಯ ಮಾಡುತ್ತಿದ್ದರೆ ಜೀವನ ಸಾರ್ಥಕವಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜ್ಞಾನ ದಾದಾ ಮಹಾರಾಜ್ ನಗರಕರ ಅವರಿಗೆ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಗುರು ವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ದಿಗಂಬರರಾವ್ ಮಾನಕಾರಿ, ಜನಾರ್ದನ ಬಿರಾದಾರ್, ಪದ್ಮಾಕರ ಪಾಟೀಲ್, ವೆಂಕಟರಾವ್ ಮಾಯಿಂದೆ, ರಂಜಿತ್ ಪಾಟೀಲ್, ವಿದ್ಯಾವಾನ್ ಪಾಟೀಲ್, ಯಾದವರಾವ್ ಕನಸೆ, ಕಿಶನ್ರಾವ್ ಪಾಟೀಲ್, ಪ್ರದೀಪ್ ಬಿರಾದಾರ್, ಭಾನುದಾಸ್ ಪಾಟೀಲ್ ಕಂಡಗೂಳ್, ವಿದ್ಯಾಸಾಗರ್ ಪಂಚೋರೇ, ಗೋವಿಂದರಾವ್ ಜೋಳದಾಪಕಾ, ಶಂಕರರಾವ್ ಬಿರಾದಾರ್ ಹಾಗೂ ಕೊಂಡಿಬಾ ಪಾಂಡ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



