ಜಿಲ್ಲಾಸುದ್ದಿ

ದಿ ಗಾಂಧಿ ಗಂಜ್ ಬ್ಯಾಂಕ್‌ಗೆ ₹1.34 ಕೋಟಿ ನಿವ್ವಳ ಲಾಭ: ವಿಜಯಕುಮಾರ್ ಗಾದಗಿ

ಬೀದರ್, ಚಿಟಗುಪ್ಪದಲ್ಲಿ ಹೊಸ ಶಾಖೆ ಆರಂಭಕ್ಕೆ ಚಿಂತನೆ; ಡಿಜಿಟಲ್ ಸೇವೆ ವಿಸ್ತರಣೆಗೆ ಆದ್ಯತೆ

ಬೀದರ್, ಆ.9: ದಿ ಗಾಂಧಿ ಗಂಜ್ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.34 ಕೋಟಿ ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಅಭಿವೃದ್ಧಿಗೆ ಹಲವು ಹೊಸ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ್ ಅಣ್ಣಪ್ಪ ಪಾಟೀಲ ಗಾದಗಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಬ್ಯಾಂಕಿನ 52ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬೀದರ್ ಹಾಗೂ ಚಿಟಗುಪ್ಪ ತಾಲೂಕು ಕೇಂದ್ರಗಳಲ್ಲಿ ಹೊಸ ಶಾಖೆಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು. ಬ್ಯಾಂಕ್ ಪ್ರಸ್ತುತ ‘ಎ’ ಗ್ರೇಡ್ ಹೊಂದಿದ್ದು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಬ್ಯಾಂಕ್ ಈಗಾಗಲೇ ಪ್ಲಾಟಿನಂ ಡೆಬಿಟ್ ಕಾರ್ಡ್, ಯುಪಿಐ, ಐಎಂಪಿಎಸ್, ಎನ್‌ಎಸಿಎಚ್, ಆರ್‌ಟಿಜಿಎಸ್, ಎನ್‌ಇಎಫ್‌ಟಿ ಹಾಗೂ ಲಾಕರ್ ಸೇವೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಮತ್ತಷ್ಟು ಡಿಜಿಟಲ್ ಸೇವೆಗಳನ್ನು ವಿಸ್ತರಿಸಲಾಗುವುದು ಎಂದು ವಿಜಯಕುಮಾರ್ ಗಾದಗಿ ಹೇಳಿದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ ಶೆಟಕಾರ್ ಅವರು ವಾರ್ಷಿಕ ವರದಿ ಮಂಡಿಸಿ, ಬ್ಯಾಂಕ್ ₹371 ಕೋಟಿ ಠೇವಣಿ ಸಂಗ್ರಹಿಸುವ ಮೂಲಕ ₹240 ಕೋಟಿ ಸಾಲ ವಿತರಿಸುವ ಗುರಿ ಹೊಂದಿದೆ ಎಂದು ವಿವರಿಸಿದರು. ಬ್ಯಾಂಕಿನ ದುಡಿಯುವ ಬಂಡವಾಳ ₹471 ಕೋಟಿ ಗುರಿ ತಲುಪಿದೆ ಎಂದು ತಿಳಿಸಿದರು.

ನಗರದ ಹೊರವಲಯದಲ್ಲಿ ಸಹಕಾರಿ ಶಿಕ್ಷಣ ತರಬೇತಿ ಕೇಂದ್ರವನ್ನು ಆರಂಭಿಸುವ ಯೋಜನೆಯೂ ಇದೆ. ಬ್ಯಾಂಕ್ ಒಟ್ಟು 8,930 ಸದಸ್ಯರನ್ನು ಹೊಂದಿದ್ದು, ₹5.79 ಕೋಟಿ ಷೇರು ಬಂಡವಾಳ, ₹313.19 ಕೋಟಿ ಠೇವಣಿ ಹಾಗೂ ₹355.28 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ದುರ್ಬಲ ವರ್ಗದವರಿಗೆ ನೀಡಿರುವ ಸಾಲದ ಮೊತ್ತ ₹24.68 ಕೋಟಿ ಇದೆ ಎಂದು ಅವರು ವಿವರಿಸಿದರು.

ಗ್ರಾಹಕರಿಗೆ ಸುಲಭ ಹಾಗೂ ವೇಗದ ಬ್ಯಾಂಕಿಂಗ್ ಸೇವೆ ಒದಗಿಸುವ ಉದ್ದೇಶದಿಂದ ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹೊಸ ಶಾಖೆಗಳ ಆರಂಭ ಹಾಗೂ ತರಬೇತಿ ಕೇಂದ್ರದ ಸ್ಥಾಪನೆಯ ಮೂಲಕ ಬ್ಯಾಂಕಿನ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಸುನೀಲಕುಮಾರ್ ಬಿರಾದಾರ ಗುನ್ನಳ್ಳಿ, ನಿರ್ದೇಶಕರಾದ ಅಶೋಕಕುಮಾರ್ ಲಾಚುರಿ, ಕಾಶಿನಾಥ ಶೆಟಕಾರ್, ಸೂರ್ಯಕಾಂತ ಶೆಟಕಾರ್, ಡಿ.ವಿ. ಸಿಂದೋಳ್, ಜಯಕುಮಾರ್ ಕಾಂಗೆ, ಮಡಿವಾಳಪ್ಪ ಗಂಗಶೆಟ್ಟಿ, ಭರತ ಶೆಟಕಾರ್, ಶಿವನಾಥ ಪಾಟೀಲ, ಅಮರನಾಥ ಫುಲೇಕರ, ವಿಶ್ವನಾಥ ಕಾಜಿ, ಉಮೇಶ ಮೂಲಿಮನಿ, ಜ್ಯೋತಿ ಗೌರಶೆಟ್ಟಿ, ಪ್ರವೀಣ ರಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೃತ್ತಿಪರ ನಿರ್ದೇಶಕ ಮಲ್ಲಿಕಾರ್ಜುನ ಕಾರಭಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ ಶೆಟಕಾರ್, ಸಹಾಯಕ ಮುಖ್ಯ ನಿರ್ವಹಣಾಧಿಕಾರಿ ಮಹಾನಂದಾ ಪಾಟೀಲ ಹಾಗೂ ಬ್ಯಾಂಕಿನ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button