ಧಾರ್ಮಿಕ
ಸಿದ್ಧಾರೂಢ ಮಠದಲ್ಲಿ ಜು.29ರಂದು ಗುರು ಪೂರ್ಣಿಮೆ ಮಹೋತ್ಸವ
ರುದ್ರಾಭಿಷೇಕ, ಪಾದಪೂಜೆ, ಪ್ರವಚನ ಹಾಗೂ ಮಹಾಪ್ರಸಾದ ವಿತರಣೆ; ಭಕ್ತರಿಗೆ ಭಾಗವಹಿಸುವಂತೆ ಆಹ್ವಾನ

ಬೀದರ್, ಜು.27: ನಗರದ ಸಿದ್ಧಾರೂಢ ಮಠದಲ್ಲಿ ಜುಲೈ 29ರಂದು ಗುರು ಪೂರ್ಣಿಮೆ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.
ಅಂದು ಬೆಳಿಗ್ಗೆ 6 ಗಂಟೆಗೆ ಸಿದ್ಧಾರೂಢರ ಮೂರ್ತಿಗೆ ಮಹಾ ರುದ್ರಾಭಿಷೇಕ ನೆರವೇರಲಿದ್ದು, ಬೆಳಿಗ್ಗೆ 9 ಗಂಟೆಗೆ ಶ್ರೀ ಗುರು ಸ್ತೋತ್ರ ಪಾರಾಯಣ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರಿಂದ ವಿಶೇಷ ಪ್ರವಚನ ಏರ್ಪಡಿಸಲಾಗಿದೆ.
ಇದಾದ ಬಳಿಕ ಮಠದ ಎಲ್ಲಾ ಸಾಧಕ-ಸಾಧಕಿಯರಿಂದ ಶ್ರೀಗಳ ಪಾದಪೂಜೆ, ನಾಣ್ಯಗಳಿಂದ ತುಲಾಭಾರ, ಸುವರ್ಣ ಕಿರೀಟ ಧಾರಣೆ, ಕನಕ ಪುಷ್ಪವೃಷ್ಟಿ, ಮಹಾ ಮಂಗಳಾರತಿ ಹಾಗೂ ಮಹಾಪ್ರಸಾದ ವಿತರಣೆಯ ಕಾರ್ಯಕ್ರಮಗಳು ನಡೆಯಲಿವೆ.
ಗುರು ಪೂರ್ಣಿಮೆ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಸದ್ಗುರುವಿನ ಕೃಪೆಗೆ ಪಾತ್ರರಾಗುವಂತೆ ಮಠದ ಆಡಳಿತಾಧಿಕಾರಿ ಹಾವಗಿರಾವ್ ಮೈಲಾರೆ ಮನವಿ ಮಾಡಿದ್ದಾರೆ.



